ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಶ್ರೀ ದೇವರು ಹೊರಾಂಗಣ ಪ್ರವೇಶಿಸಿದರು. ಬಳಿಕ ದೀಪಾವಳಿ ಪ್ರಯುಕ್ತ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿತು. ಈ ಮೂಲಕ ಕ್ಷೇತ್ರದಲ್ಲಿ ದೇವರ ಹೊರಾಂಗಣ ವರ್ಷಾವಧಿ ಉತ್ಸವಗಳು ಆರಂಭವಾಯಿತು. ಇನ್ನು ಮುಂದೆ ದೇವಳದಲ್ಲಿ ದೇವರ ಪಾಲಕಿ ಉತ್ಸವ, ಭಂಡಿ ಉತ್ಸವ ಹಾಗೂ ಮಂಟಪೋತ್ಸವ ಸೇವೆಗಳು ನಡೆಯುತ್ತದೆ. ಮುಂದೆ ಬರುವ ಲಕ್ಷದೀಪೋತ್ಸವದ ನಂತರ ರಥಬೀದಿಯಲ್ಲಿ ರಥೋತ್ಸವಗಳು ನಡೆಯಲಿವೆ.
ನಾಡಿನ ಉಳಿದ ದೇವಾಲಯಗಳಲ್ಲಿ ಪತ್ತನಾಜೆಯಂದು ಕೊನೆಯ ಉತ್ಸವವಾಗಿ ಉತ್ಸವ ಮೂರ್ತಿ ಗರ್ಭಗುಡಿ ಪ್ರವೇಶಿಸುವುದರೊಂದಿಗೆ ಉತ್ಸವಗಳು ಕೊನೆಯಾಗುತ್ತವೆ. ಕುಕ್ಕೆಯಲ್ಲಿ ಮಾತ್ರ ಜ್ಯೇಷ್ಠ ಶುದ್ಧಷಷ್ಠಿಯಂದು ಕೊನೆಯ ಉತ್ಸವ ನಡೆದು ದೀಪಾವಳಿ ಅಮವಾಸ್ಯೆಯಂದು ಉತ್ಸವ ಆರಂಭವಾಗುತ್ತದೆ. ದೇವರ ಮಹಾಪೂಜೆ ಬಳಿಕ ದೇವರು ಹೊರಾಂಗಣ ಪ್ರವೇಶಿಸಿದರು. ನಂತರ ಆನೆ, ಬಿರುದಾವಳಿ, ಮಂಗಳವಾದ್ಯಗಳ ನಿನಾದದೊಂದಿಗೆ ದೇವರ ಉತ್ಸವಾದಿ ನೆರವೇರಿತು.
ಕಾರ್ತಿಕ ಮಾಸದಲ್ಲಿ ಬರುವ ಲಕ್ಷ ದೀಪೋತ್ಸವದ ನಂತರ ರಥಬೀದಿಯಲ್ಲಿ ರಥೋತ್ಸವ ಆರಂಭಗೊಳ್ಳಲಿದೆ. ಈ ಮೊದಲು ದೇವಳದಲ್ಲಿ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಲಕ್ಷ್ಮೀ ಪೂಜೆ ನೆರವೇರಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ವನಜಾ ವಿ.ಭಟ್, ಶೋಭಾ ಗಿರಿಧರ್, ಲೋಕೇಶ್ ಮುಂಡುಕಜೆ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.