ಅಲ್ಲಲ್ಲಿ ಮಳೆ ಬಿದ್ದರೂ, ಬೇಸಿಗೆ ಇನ್ನೂ ಮುಗಿದಿಲ್ಲ. ಈ ಸೆಖೆಗೆ ಗಂಟಲು ಸ್ವಲ್ಪ ಜಾಸ್ತಿಯೇ ಒಣಗಿ ಪದೇ ಪದೇ ಬಾಯಾರಿಕೆಯೆನಿಸುತ್ತದೆ. ಬಿಸಿಲಿನ ಝಳಕ್ಕೆ ಸ್ವಲ್ಪ ಸುಸ್ತು ಕೂಡ ಜಾಸ್ತಿ. ಹೀಗಿರುವಾಗ ಯಾರಾದರೂ ಕಲ್ಲಂಗಡಿ ಹಣ್ಣನ್ನೋ ಅದರಿಂದ ಮಾಡಿದ ಜ್ಯೂಸ್ನ್ನೋ ತಂದು ಕೊಟ್ಟರೆ ಕ್ಷಣಾರ್ಧದಲ್ಲಿಯೇ ಸುಸ್ತು ನಿವಾರಣೆ ಆದಂತೆನಿಸಿ ಖುಷಿಯಾಗುತ್ತದೆ. ಅದು ಕಲ್ಲಂಗಡಿ ಮಹಿಮೆ.
ಶೇಕಡ 92ರಷ್ಟು ನೀರಿನಂಶವುಳ್ಳ ಈ ಹಣ್ಣಿನಲ್ಲಿ ಕೊಬ್ಬು, ಕಬ್ಬಿಣ, ವಿಟಮಿನ್ ಎ,ಬಿ,ಸಿ, ಪ್ರೋಟೀನ್, ಕ್ಯಾಲ್ಸಿಯಂ, ಸೇರಿದಂತೆ ಹಲವಾರು ರೀತಿ ಪೌಷ್ಟಿಕಾಂಶ ಪುಷ್ಕಳವಾಗಿವೆ. ಹಾಗಾಗಿಯೇ ಇದು ಸರ್ವಜನ ಪ್ರಿಯ ಹಣ್ಣು.ವೈವಿಧ್ಯಮಯ ತಳಿಗಳಲ್ಲಿ ದೊರಕುವ ಈ ಹಣ್ಣಿನ ಉತ್ಪಾದನೆಯಲ್ಲಿ ಚೀನಾ ಅಗ್ರ ಸ್ಥಾನದಲ್ಲಿದೆ.
ಕಲ್ಲಂಗಡಿ ಹಣ್ಣುಗಳನ್ನು ಉಪಯೋಗಿಸಿ ಉಪ್ಪಿನಕಾಯಿ, ಜಾಮ್, ಜೆಲ್ಲಿ ಮೊದಲಾದವುಗಳನ್ನು ಕೂಡ ಮಾಡುತ್ತಾರೆ.
ಕಲ್ಲಂಗಡಿ ಹಣ್ಣು ಕೇವಲ ಬಾಯಾರಿಕೆಯನ್ನಷ್ಟೇ ನೀಗುವುದಲ್ಲ. ಅದರ ಸೇವನೆಯಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
* ಕಲ್ಲಂಗಡಿ ಹಣ್ಣು ಸೇವನೆಯಿಂದಾಗಿ ದೇಹ ತಂಪಾಗಿರುವುದಲ್ಲದೆ ದೇಹದಲ್ಲಿ ರಕ್ತ ಸಂಚಾರ ಸರಿಯಾದ ರೀತಿಯಲ್ಲಿ ನಡೆಯುತ್ತದೆ. ಇದು ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿ ಮಾತ್ರವಲ್ಲ ನಮ್ಮ ಮಾನಸಿಕ ಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಇದು ಸಹಕಾರಿ. ಇದರಲ್ಲಿ ಕಡಿಮೆ ಕ್ಯಾಲೊರಿ ಅಂಶ ಇರುವುದರಿಂದ ಪ್ರತಿದಿನ ರಾತ್ರಿ ಇದರ ಸೇವನೆಯಿಂದ ದೇಹ ತೂಕವನ್ನು ಕಡಮೆ ಮಾಡಿಕೊಳ್ಳಲು ಸಾಧ್ಯವಿದೆ.
* ಕಲ್ಲಂಗಡಿ ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣಕ್ಕೆ ತರುತ್ತದೆ. ಮಧುಮೇಹಿಗಳಿಗೆ ಇದೊಂದು ಉತ್ತಮ ಆಹಾರವಾಗಿದ್ದು ಗ್ಲುಕೋಸ್ ಪ್ರಮಾಣ ಹೆಚ್ಚಲು ಸಹಕಾರಿ.
* ಮಹಿಳೆಯರ ಋತುಸ್ರಾವದ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆ ಅತಿಯಾದ ರಕ್ತಸ್ರಾವವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಲ್ಲು ಮತ್ತು ವಸಡುಗಳ ಆರೋಗ್ಯವನ್ನು ಕಾಪಾಡುವಲ್ಲಿಯೂ ಈ ಹಣ್ಣು ಸಹಾಯ ಮಾಡುತ್ತದೆ.
* ಗರ್ಭಿಣಿಯಾಗಿದ್ದಾಗ ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಮಗು ಚೆನ್ನಾಗಿ ಬೆಳೆಯುವುದಲ್ಲದೆ ಎದೆಹಾಲು ವೃದ್ಧಿಸಲು ಸಹಾಯ ಮಾಡುತ್ತದೆ.