ಸುಬ್ರಹ್ಮಣ್ಯ: ‘ತುಳು ಭಾಷೆಯ ಸಾಹಿತ್ಯ, ಸಂಸ್ಕೃತಿ ಜೀವಂತಿ ಉಳಿಸಿಕೊಳ್ಳಬೇಕು’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಸಹಕಾರದಿಂದ ಕೆ.ಎಸ್.ಎಸ್. ಕಾಲೇಜು ಸಭಾಬವನದಲ್ಲಿ ಶುಕ್ರವಾರ ಉದ್ಘಾಟನೆಗೊಂಡ ಮೂರು ದಿನಗಳ ತುಳು ಗೀತ ಗಾಯನ. ತುಳು ಗೀತೆಗಳ ಗಾಯನ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ವಿಶ್ವದಲ್ಲಿ 1.5 ಕೋಟಿ ತುಳು ಭಾಷಿಕರು ಇರುವರು. ತುಳು ಭಾಷೆಯ ಮೇಲೆ ಹೊರದೇಶಗಳಲ್ಲಿ ಕೂಡ ಅಭಿಮಾನವಿರುವುದು ನಾವು ಹೆಮ್ಮೆ ಪಡುವಂಥದ್ದು. ತುಳು ಭಾಷಗೆ ಸರ್ಕಾರ ಕೂಡ ಪ್ರೋತ್ಸಾಹ ನೀಡಿದೆ. ಪರಿಣಾಮ ಅಕಾಡೆಮಿಗೆ 26 ವರ್ಷ ಸಂದಿದ್ದು ಬೆಳ್ಳಿ ಹಬ್ಬ ಆಚರಿಸುತ್ತಿದೆ. ಇದೇ ಹೊತ್ತಲ್ಲೇ ತಾಲ್ಲೂಕು ಮಟ್ಟದಲ್ಲಿ ತುಳು ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದೇವೆ. ವಿದ್ಯಾರ್ಥಿಗಳಲ್ಲಿ ತುಳು ಭಾಷೆಯ ಮೇಲೆ ಹಿಡಿತ ಸಾಧಿಸಲು ಶಿಕ್ಷಣ ಸಂಸ್ಥೆಗಳಲ್ಲಿ ಕಮ್ಮಟ ನಡೆಸುತ್ತಿದ್ದೇವೆ’ ಎಂದರು.
ಕರ್ನಾಟಕ ಅರೆಭಾಷಾ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ ಜಯರಾಮ, ‘ ತುಳುವಿಗೆ ಪ್ರಾಚೀನ ಇತಿಹಾಸವಿದೆ. ಅಕಾಡೆಮಿ ಬಳಿಕ ಪ್ರಾಧಾನ್ಯ ದೊರಕಿದೆ’ ಎಂದರು.
ವೇದಿಕೆಯಲ್ಲಿ ಅಕಾಡೆಮಿ ನಿರ್ದೇಶಕ ನಿರಂಜನ ರೈ ಮಠಂತಬೆಟ್ಟು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲ ರಂಗಯ್ಯ, ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ ಹೆಗ್ಡೆ, ಕವಿತಾ ದಿನಕರ್, ರಮ್ಯಾ ದಿಲೀಪ್ ಬಾಬ್ಲುಬೆಟ್ಟು, ಉಪಪ್ರಾಂಶುಪಾಲ ಪ್ರೊ. ಮಂಜುನಾಥ ಭಟ್ ಉಪಸ್ಥಿತರಿದ್ದರು.
ಕಾಲೇಜು ಪ್ರಾಂಶುಪಾಲ ಪ್ರೊ. ರಂಗಯ್ಯ ಶೆಟ್ಟಿಗಾರ್ ಸ್ವಾಗತಿಸಿದರು. ಉಪನ್ಯಾಸಕಿ ಸುಮಿತ್ರ ವಂದಿಸಿದರು. ಉಪನ್ಯಾಸಕಿ ಆರತಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.