ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇಧಕ್ಕೆ ಸೇರಿಸುವ ವಿಚಾರವನ್ನು ಸಂಸದರು ಕೈಗೆತ್ತಿಕೊಳ್ಳದಿದ್ದರೆ, ಮುಂದಿನ ಚುನಾವಣೆಯಲ್ಲಿ ನಾವು ರಾಜಕೀಯ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಅಭಿಯಾನವು ಟ್ವಿಟರ್ನಲ್ಲಿ ಆರಂಭಗೊಂಡಿದೆ.
‘ನಿಕ್ಲು ಯಾಪ ಪಾತೆರ್ಯರೆ, ಕಾಲಿ ಪಾತುರುನೆ ಅತ್ತ್, ನೋಟಿಸ್ ಕೊರ್ಲೆ’ (ನೀವು ಯಾವಾಗ ಸಂಸತ್ತಿನಲ್ಲಿ ತುಳು ಪರವಾಗಿ ಮಾತನಾಡುವುದು. ಕೇವಲ ಮಾತನಾಡುವುದಲ್ಲ, ನೋಟಿಸ್ ನೀಡಿ) ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶೋಭಾ ಕರಂದ್ಲಾಜೆಗೆ ಮಹಿ ಮೂಲ್ಕಿ ಎಂಬವರು ಟ್ಯಾಗ್ ಮಾಡಿದ್ದಾರೆ.
‘ನೀವು ಮಾತನಾಡದಿದ್ದರೆ, ನಾವು ರಾಜಕೀಯ ನಿರ್ಧಾರ ಕೈಗೊಳ್ಳುತ್ತೇವೆ’ ಎಂದೂ ಉಲ್ಲೇಖಿಸಿದ್ದಾರೆ. ಇದಕ್ಕೆ ಪೂರಕವಾಗಿ ಭೋಜಪುರಿ ಭಾಷೆಯ ಪರವಾಗಿ ದನಿ ಎತ್ತಿರುವ ಸಂಸದರ ವಿಡಿಯೊ ಟ್ಯಾಗ್ ಮಾಡಿದ್ದಾರೆ.
ಒಟ್ಟಾರೆ, ತುಳು ಎಂಟನೇ ಪರಿಚ್ಛೇಧಕ್ಕೆ ಸೇರಿಸಲು ಸಂಸದರು ರಾಜಕೀಯ ಇಚ್ಛಾಶಕ್ತಿ ತೋರಿಸಬೇಕು ಎಂಬ ಅಭಿಯಾನ ಶುರುವಾಗಿದೆ.