ಮಂಗಳೂರು: ಇಲ್ಲಿನ ಕರಂಗಲ್ಪಾಡಿ ಬಳಿ ಶುಕ್ರವಾರ ಮಧ್ಯಾಹ್ನ ನಿರ್ಮಾಣ ಹಂತದ ಕಾಂಪೌಂಡ್ ಕುಸಿದಿದ್ದು, ಹಲವು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದಾರೆ. ಐವರು ಕಾರ್ಮಿಕರು ಮೃತಪಟ್ಟಿರುವ ಶಂಕೆ ಇದ್ದು, ಇಬ್ಬರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ.
ಕರಂಗಲ್ಪಾಡಿಯಲ್ಲಿ ಹಳೆಯ ಮನೆಯೊಂದನ್ನು ತೆರವುಗೊಳಿಸಿ, ಹೊಸ ವಾಣಿಜ್ಯ ಕಟ್ಟಡ ನಿರ್ಮಿಸಲಾಗುತ್ತಿತ್ತು. ಕಾಂಪೌಂಡ್ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಮೇಲಿನಿಂದ ಮಣ್ಣು ಕುಸಿದು ಕಾರ್ಮಿಕರ ಮೇಲೆ ಬಿದ್ದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾಂಕ್ರೀಟ್ ತಡೆಗೋಡೆ ನಿರ್ಮಾಣಕ್ಕೆ ಸಿದ್ಧಪಡಿಸಿದ್ದ ಉಕ್ಕಿನ ಸರಳುಗಳ ಹೊದಿಕೆಯ ನಡುವೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗಲೇ ಮಣ್ಣು ಕುಸಿದುಬಿದ್ದಿದೆ.