ಉಜಿರೆ : ‘ನಿರಂತರ ಜ್ಞಾನ ಸಂಗ್ರಹದಿಂದ ಉನ್ನತ ಸಾಧನೆ ಸಾಧ್ಯವಾಗುತ್ತದೆ’ ಎಂದು ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ.ಯಶೋವರ್ಮ ಹೇಳಿದರು.
ಉಜಿರೆ ಎಸ್.ಡಿ.ಎಂ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ಶುಕ್ರವಾರ ‘ರಸಾಯನಶಾಸ್ತ್ರದಲ್ಲಿ ಆಧುನಿಕ ಬೆಳವಣಿಗೆಗಳು’ ಎಂಬ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರುಮಾತನಾಡಿದರು.
‘ಜ್ಞಾನವೇ ಶಕ್ತಿಯಾಗಿದ್ದು ವಿದ್ಯಾರ್ಥಿಗಳು ನಿರಂತರ ಜ್ಞಾನ ಸಂಗ್ರಹದ ಬಗ್ಗೆ ಆಸಕ್ತಿ, ಕುತೂಹಲ ಮತ್ತು ದಾಹ ಹೊಂದಿರಬೇಕು. ತನ್ಮೂಲಕ ತನ್ನ ಸಾಮರ್ಥ್ಯವೃದ್ಧಿ ಮಾಡಿಕೊಳ್ಳಬೇಕು. ವಿಜ್ಞಾನದ ಎಲ್ಲಾ ಶಾಖೆಗಳು ಪರಸ್ಪರ ಪೂರಕವಾಗಿದ್ದು ನಿತ್ಯವೂ ನಮ್ಮ ಜ್ಞಾನ ದಾಹವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ನಿವೃತ್ತ ಪ್ರಾಧ್ಯಾಪಕ ಡಾ. ಇ ಎಸ್ ದ್ವಾರಕದಾಸ್ ಮಾತನಾಡಿ, ‘ನಮ್ಮ ದೇಶದ ವಿಜ್ಞಾನಿಗಳು ತುಂಬಾ ಬುದ್ಧಿವಂತರಾಗಿದ್ದಾರೆ. ಆದರೆ ಅವರು ಮಾಡುವ ಒಳ್ಳೆಯ ಕೆಲಸ, ಅಧ್ಯಯನ ಹಾಗೂ ಸಂಶೋಧನೆಯ ಪ್ರಯೋಜನ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ’ ಎಂದರು.
‘ಇಂದು ಅಧ್ಯಯನ ಮತ್ತು ಸಂಶೋಧನೆಗೆ ಸಾಕಷ್ಟು ಸಂಪನ್ಮೂಲಗಳು, ಅವಕಾಶ ಹಾಗೂ ನಮ್ಮಲ್ಲಿ ಉತ್ತಮ ಸಾಮರ್ಥ್ಯ ಇರುವುದರಿಂದ ಎಲ್ಲವನ್ನೂ ಬಳಸಿಕೊಂಡು ಉತ್ಕೃಷ್ಟ ಸಾಧನೆ ಮಾಡಿದಲ್ಲಿ ದೇಶದ ಪ್ರಗತಿ ಸಾಧ್ಯವಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ.ಎನ್ ಕೇಶವ ಮಾತನಾಡಿ ‘ವಿಜ್ಞಾನದ ಎಲ್ಲಾ ಶಾಖೆಗಳ ಅಧ್ಯಯನಕ್ಕೆ ರಸಾಯನವಿಜ್ಞಾನ ಆಧಾರವಾಗಿದೆ. ಅದನ್ನು ಸಮರ್ಪಕವಾಗಿ ಬಳಸಬೇಕು’ ಎಂದು ಅವರು ಸಲಹೆ ನೀಡಿದರು.
ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪಿ. ವಿಶ್ವನಾಥ್ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಯೋಜಕಿ ಪ್ರೊ. ಕೆ.ಪಿ ನಂದಕುಮಾರಿ ಧನ್ಯವಾದವಿತ್ತರು. ಪ್ರೊ. ನೆಫಿಸೆತ್ ಕಾರ್ಯಕ್ರಮ ನಿರ್ವಹಿಸಿದರು.