ಉಪ್ಪಿನಂಗಡಿ: ‘ರಸಗೊಬ್ಬರ ಬೆಲೆ ಏರಿಕೆಯಿಂದ ರೈತರಿಗೆ ಭಾರಿ ಹೊರೆಯಾಗುತ್ತಿದ್ದು, ಬೆಲೆ ಕಡಿತಗೊಳಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸುವ ನಿರ್ಣಯವನ್ನು ಭಾನುವಾರ ನಡೆದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಸಭೆಯಲ್ಲಿ ಅಂಗೀಕರಿಸಲಾಯಿತು.
ಕೆ.ವಿ. ಪ್ರಸಾದ್ ಕಾಯರ್ಪಾಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಸಗೊಬ್ಬರ ಬೆಲೆ ಏರಿಕೆ ಕುರಿತು ಚರ್ಚೆ ನಡೆಯಿತು.
ಸಂಸ್ಥೆ ಅಮೃತ ಮಹೋತ್ಸವದತ್ತ ಸಾಗುತ್ತಿದ್ದು, ಇದರ ಅಂಗವಾಗಿ ಸಂಘದ ಸದಸ್ಯರಿಗೆ ಗೃಹ ಮತ್ತು ಪಂಪ್ ಸೆಟ್ಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ವ್ಯವಸ್ಥೆ ಜಾರಿಗೊಳಿಸುವ ಕುರಿತು, ಭತ್ತ, ತರಕಾರಿ ಬೆಳೆಗೆ ಪ್ರೋತ್ಸಾಹ ನೀಡುವ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಿತು. ಸಹಕಾರ ಸಂಘದ ಅಡಿಯಲ್ಲಿ ಜನತಾ ಬಜಾರ್ ಸ್ಥಾಪನೆ ಮಾಡಿ ಆ ಮೂಲಕ ಉದ್ಯೋಗ ಸೃಷ್ಟಿ ಮಾಡಬೇಕು ಎಂಬ ಸಲಹೆ ವ್ಯಕ್ತಪಡಿಸಿದ ಕೆಲವು ಸದಸ್ಯರು ಇದರ ಕಾರ್ಯಯೋಜನೆಯ ಬಗ್ಗೆಯೂ ಸಲಹೆಗಳನ್ನು ನೀಡಿದರು.
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು, ನಿರ್ದೇಶಕ ಯಶವಂತ ಜಿ., ಜಗದೀಶ ರಾವ್, ರಾಜೇಶ್, ಯತೀಶ್ ಶೆಟ್ಟಿ, ರಾಮ ನಾಯ್ಕ್, ಶ್ಯಾಮಲಾ ಶೆಣೈ, ಸುಜಾತ ಆರ್. ರೈ, ದಯಾನಂದ, ಕುಂಞನ್. ಸಚಿನ್ ಎಂ. ಶರತ್ ಇದ್ದರು.
ಸಂಘದ ಸಿಇಒ ಕ್ಲೇರಿ ವೇಗಸ್ ಲೆಕ್ಕಪತ್ರ ಮಂಡಿಸಿದರು. ವ್ಯವಸ್ಥಾಪಕ ಪುಷ್ಪರಾಜ ಶೆಟ್ಟಿ ನಿರೂಪಿಸಿದರು.