ಮಂಗಳೂರು: ಭಾರತವು ವಿಶ್ವಕ್ಕೆ ಅಧ್ಯಾತ್ಮದ ಬೆಳಕು ನೀಡಿದ ದೇಶ. ವ್ಯಕ್ತಿ ಮತ್ತು ಪ್ರಕೃತಿ ಎರಡರಲ್ಲಿ ದೇವರನ್ನು ಕಂಡಿರುವ ದೇಶ ಇದಾಗಿದೆ. ರಾಮಾಯಾಣದ ಮೂಲಕ ಅಧ್ಯಾತ್ಮವನ್ನು ಪ್ರಪಂಚಕ್ಕೆ ಸಾರಿದ ಮಹಾನ್ ಜ್ಞಾನಿಯೇ ಮಹರ್ಷಿ ವಾಲ್ಮೀಕಿ ಎಂದು ಸಂಸದ ನಳಿನ್ಕುಮಾರ್ ಕಟೀಲ್ ಹೇಳಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿಯ ಸಂಭಾಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
‘ನಿತ್ಯದ ಜೀವನದಲ್ಲಿ ಮಹರ್ಷಿ ವಾಲ್ಮೀಕಿ ಆದರ್ಶಗಳನ್ನು ಪಾಲಿಸಿಕೊಂಡು ನಾವು ಮುನ್ನಡೆಯಬೇಕು. ಅವರ ಆದರ್ಶಗಳಿಂದ ನಾವು ಸ್ಫೂರ್ತಿ ಪಡೆಯಬಹುದಾಗಿದೆ’ ಎಂದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾತನಾಡಿ, ‘ರಾಮಾಯಣವನ್ನು ಧಾರ್ಮಿಕ ಗ್ರಂಥವಾಗಿ ನೋಡದೇ, ಅದರಲ್ಲಿರುವ ಅಂಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಆದರ್ಶವಾಗಿ ಪಾಲಿಸಿಕೊಂಡು ಮುಂದೆ ಸಾಗಬೇಕು’ ಎಂದರು.
‘ರಾಮಾಯಣದಲ್ಲಿ ಅನಾದಿಕಾಲದಲ್ಲಿ ನಮ್ಮ ಇಂದಿನ ಜೀವನ ಶೈಲಿಯನ್ನು ತಿಳಿಸಿದ ಮಹಾನ್ ಜ್ಞಾನಿ ಮಹರ್ಷಿ ವಾಲ್ಮೀಕಿ. ಮನಸ್ಸಿನಲ್ಲಿ ಬದಲಾವಣೆ ಮಾಡಿಕೊಂಡಿರೆ, ಎಂತಹ ಮಹಾಕಾವ್ಯಗಳನ್ನು ರಚನೆ ಮಾಡಬಹುದು ಎನ್ನುವುದಕ್ಕೆ ಸ್ವಷ್ಟ ನಿದರ್ಶನವೇ ಅವರು’ ಎಂದು ತಿಳಿಸಿದರು.
ಶಾಸಕ ಡಾ.ವೈ. ಭರತ್ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರೂಪಾ ಎಂ.ಜೆ., ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.