ಮೂಡುಬಿದಿರೆ: ‘ಶ್ರವಣ ಪರಂಪರೆ ಸಾಹಿತ್ಯ ಮತ್ತು ಭಕ್ತಿ ಪ್ರಧಾನವಾದ ಸಾಹಿತ್ಯವನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಮಾತ್ರ ನೋಡದೆ, ಅದು ಕನ್ನಡ ಸಂಸ್ಕೃತಿಯ ಪ್ರಗತಿಗೆ ಮತ್ತು ಬದುಕಿನ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ’ ಎಂದು ಸಂಶೋಧಕ ಡಾ.ಬಸವರಾಜ ಕಲ್ಗುಡಿ ಹೇಳಿದರು.
ಮಂಗಳವಾರ ರಾತ್ರಿ ಇಲ್ಲಿ ನಡೆದ 74ನೇ ದಸರಾ ಉತ್ಸವದ ಅಂಗವಾಗಿ ವರ್ಧಮಾನ ಪ್ರಶಸ್ತಿ ಪೀಠದ ವತಿಯಿಂದ ‘ವರ್ಧಮಾನ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಲೇಖಕಿ ಡಾ.ದೀಪಾ ಫಡ್ಕೆ, ‘ಬದುಕು ನಾವು ಎಣಿಸಿದ ಕಡೆ ಹೋಗದೇ ಇದ್ದಲ್ಲಿ, ಅದು ಎಳೆದುಕೊಂಡು ಹೋದ ಕಡೆ ನಾವು ಹೋದಾಗ ಅಲ್ಲೂ ಆನಂದ ಸಿಗುತ್ತದೆ, ಅಂತಹ ಸೆಳೆತದಿಂದ ಸಾಹಿತ್ಯ ಕ್ಷೇತ್ರಕ್ಕೆ ಬಂದವಳು ನಾನು' ಎಂದು ಹೇಳಿದರು.
ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬೇರೆ ಬೇರೆ ಪ್ರಕಾರಗಳಿದ್ದರೂ ಅವೆಲ್ಲವುಗಳ ಆಶಯ ಮನುಷ್ಯ ಸಂಬಂಧವನ್ನು ಗಟ್ಟಿಗೊಳಿಸುವುದಾಗಿದೆ. ಡಾ. ಶಿವರಾಮ ಕಾರಂತರ ಬಳಿಕ ಕಡಲ ತಡಿಯ ಭಾರ್ಗವ ಗೌರವ ಸಿಗುವುದಾದರೆ ಅದಕ್ಕೆ ಡಾ.ನಾ ಮೊಗಸಾಲೆ ಸೂಕ್ತ ವ್ಯಕ್ತಿ’ಎಂದರು.