ಮೂಡುಬಿದಿರೆ: ‘ಸಮಾಜದ ಪ್ರಗತಿಯ ಹಾದಿಯಲ್ಲಿ ಉತ್ತಮ ಅಂಶಗಳ ಸಾರವನ್ನು ಕಲಾವಿದರು ಸ್ವೀಕರಿಸಿ ಸತ್ಫಲಗಳನ್ನು ಪ್ರತಿಫಲವಾಗಿ ಸಮಾಜಕ್ಕೆ ನೀಡುವವರಾಗಬೇಕು' ಎಂದು ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಭನುವಾರ ವಿದ್ಯಾಗಿರಿಯ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ವಿರಾಸತ್ ಅಂಗವಾಗಿ ಜರಗಿದ ರಾಷ್ಟ್ರೀಯ ಚಿತ್ರಕಲಾವಿದರು ಮತ್ತು ಶಿಲ್ಪ ಕಲಾವಿದರ ಕೂಡುವಿಕೆಯಲ್ಲಿ ನಡೆದ ವರ್ಣ ವಿರಾಸತ್ ಹಾಗೂ ಶಿಲ್ಪವಿರಾಸತ್ನ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ವರ್ಣ ವಿರಾಸತ್ ಪ್ರಶಸ್ತಿ ಪುರಸ್ಕೃತರಾಗಲಿರುವ ಹೈದರಾಬಾದಿನ ಹಿರಿಯ ಕಲಾವಿದ ಸೂರ್ಯಪ್ರಕಾಶ್ ಮಾತನಾಡಿ ಚಿತ್ರಕಲಾವಿದರ ಈ ಮಟ್ಟದ ಶಿಬಿರಗಳು ಅಪರೂಪದ ಕೊಡುಗೆ. 50ರ ದಶಕದಲ್ಲಿ ಶ್ರೀನಗರದಲ್ಲಿ ಜಿ.ಆರ್. ಸಂತೋಷ್ ಆರಂಭಿಸಿದ್ದ ಈ ಪ್ರಕ್ರಿಯೆ ಬಳಿಕ ರಾಷ್ಟ್ರೀಯ ಅಕಾಡೆಮಿ ಹಾಗೂ ಕಾರ್ಪೊರೇಟ್ ವಲಯಗಳವರು ಮುಂದುವರೆಸಿದ್ದು ಇದೀಗ ಶಿಕ್ಷಣ ಸಂಸ್ಥೆಗಳು ಈ ಪರಂಪರೆಯನ್ನು ಮುಂದುವರೆಸುತ್ತಿರುವುದು ಸಂತಸ ತಂದಿದೆ. ಎಳೆಯರು ಸಂಸ್ಕೃತಿ ಪ್ರೀತಿಯಿಂದ ಕಲೆಯನ್ನು ಬೆಳೆಸುವ ಕರ್ತವ್ಯ ನಿರ್ವಹಿಸಬೇಕಾಗಿದೆ’ ಎಂದವರು ಹೇಳಿದರು.
ಕಲಾವಿದ ಬೆಂಗಳೂರಿನ ಶಶಿಧರ್ ಮಾತನಾಡಿ, ‘ ಹಿಂದುಳಿದಿರುವ ಪರಂಪರೆಯ ಕಲೆಗಳು, ನೈಸರ್ಗಿಕ ವರ್ಣಗಳ ಕುರಿತ ಅಧ್ಯಯನ ನಡೆಯಬೇಕಾಗಿದೆ. ಕಲೆ ಪರಿಸರ ಸ್ನೇಹಿಯಾಗಬೇಕಿದೆ ಎಂದರು.
ವರ್ಣವಿರಾಸತ್ನ 10 , ಶಿಲ್ಪವಿರಾಸತ್ನಲ್ಲಿ ಪಾಲ್ಗೊಂಡ 31 ಕಲಾವಿದರನ್ನು ಪ್ರಮಾಣಪತ್ರ ಸಹಿತ ಗೌರವಿಸಲಾಯಿತು. ವಿದ್ಯಾರ್ಥಿನಿ ದೀಕ್ಷಾ ಗೌಡ ನಿರೂಪಿಸಿದರು. ಚಿತ್ರ ಕಲಾವಿದ ಡಾ, ಅಖ್ತರ್ ಹುಸೇನ್, ಶಿಬಿರದ ಸಲಹಾ ಸಮಿತಿಯ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.