ಉಜಿರೆ: ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮೊದಲ ಬಾರಿ ಶುಕ್ರವಾರ ಧರ್ಮಸ್ಥಳಕ್ಕೆ ಬರಲಿದ್ದು ಅವರಿಗೆ ಭವ್ಯ ಸ್ವಾಗತ ಕೋರಲು ಭರದ ಸಿದ್ಧತೆ ನಡೆಯುತ್ತಿದೆ.
ದೇವಳ ನೌಕರರು, ಊರ ಜನರು ಹಾಗೂ ಸಂಘ ಸಂಸ್ಥೆಗಳ ಸದಸ್ಯರು, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಧರ್ಮಸ್ಥಳದ ದೇವಸ್ಥಾನ, ಬೀಡು, ಅತಿಥಿ ಗೃಹ, ಪ್ರವೇಶದ್ವಾರ ಇತ್ಯಾದಿ ಕಟ್ಟಡಗಳನ್ನು ಅಲಂಕರಿಸುತ್ತಿದ್ದಾರೆ.
ಧರ್ಮಸ್ಥಳದ ಮುಖ್ಯ ಪ್ರವೇಶದ್ವಾರದಿಂದ ಬೀಡಿನ ವರೆಗೆ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಗ್ರಾಮೀಣ ಜಾನಪದ ಸೊಗಡು ಪ್ರತಿಬಿಂಬಿಸುವ ಕೊಂಬು, ಕಹಳೆ, ಶಂಖ, ದುಡಿ, ಪಕ್ಕಿನಿಶಾನಿ, ಬಸವ, ನಂದಿಕೋಲು, ಯಕ್ಷಗಾನ ವೇಷ, ಹುಲಿವೇಷ, ಭಜನೆ, ಕೋಲಾಟ, ಚೆಂಡೆ ವಾದನ, ರಜತ ಕಲಶದೊಂದಿಗೆ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ನಾನೂರು ಮಹಿಳೆಯರು ತಟ್ಟೆಯಲ್ಲಿ ಪುಷ್ಪಾರ್ಚನೆ ಮಾಡುವರು ಎಂದು ತಿಳಿಸಲಾಗಿದೆ.