ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಕಾಡುತ್ತಿರುವ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ, ದಾರಿದೀಪ ಅಳವಡಿಕೆ ಮತ್ತು ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಕೋವಿಡ್ ವಿಚಾರಕ್ಕೆ ಸಂಬಂಧಿಸಿ ರೋಗಿ ಮೃತಪಟ್ಟ ಬಳಿಕ ಆರೋಗ್ಯ ಇಲಾಖೆ ಎಚ್ಚರಗೊಳ್ಳುತ್ತಿದೆ ಎಂದು ಪಕ್ಷಾತೀತವಾಗಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ವಿಶೇಷ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಸದಸ್ಯರಾದ ಎ. ಗೋವಿಂದ ಪ್ರಭು, ಎ.ರಾಮಕೃಷ್ಣ ಆಳ್ವ, ಲುಕ್ಮಾನ್ ಕೈಕಂಬ, ಸಿದ್ಧಿಕ್ ಗುಡ್ಡೆಯಂಗಡಿ, ಮುನೀಶ ಆಲಿ, ಹರಿಪ್ರಸಾದ್ ಭಂಡಾರಿಬೆಟ್ಟು ಮತ್ತಿತರರು ಮಾತನಾಡಿ, ‘ಪ್ರತಿ ವಾರ್ಡ್ಗೆ ತಲಾ 13ರಂತೆ ದಾರಿದೀಪ ಅಳವಡಿಕೆ ಆಗಿಲ್ಲ’ ಎಂದು ಆರೋಪಿಸಿದರು. ಪಾಣೆಮಂಗಳೂರು ಸೇತುವೆ ಮೇಲಿನ ದಾರಿದೀಪ ನಿರ್ವಹಣೆಯೂ ಆಗಿಲ್ಲ. ಇದಕ್ಕಾಗಿ ಗುತ್ತಿಗೆದಾರರನ್ನು ಬದಲಾಯಿಸಿ ಎಂದು ಒತ್ತಾಯಿಸಿದರು.
ಪುರಸಭಾ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಮತ್ತೆ ಮುಖ್ಯವಾಹಿನಿಗೆ ತರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆಗೆ ಪ್ರತ್ಯೇಕ ಸಭೆ ನಡೆಸಲಾಗಿದೆ ಎಂದು ಅಧಿಕಾರಿ ರಝಾಕ್ ಮಾಹಿತಿ ನೀಡಿದರು.
ಸದಸ್ಯರಾದ ಮಹಮ್ಮದ್ ನಂದರಬೆಟ್ಟು, ಗಂಗಾಧರ ಪೂಜಾರಿ, ಶಶಿಕಲಾ, ಗಾಯತ್ರಿ ಪ್ರಕಾಶ್, ದೇವಕಿ ಚರ್ಚೆಯಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಪ್ರಭಾರ ಮುಖ್ಯಾಧಿಕಾರಿ ಲೀಲಾವತಿ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೋ, ಆರೋಗ್ಯ ನಿರೀಕ್ಷಕ ಜೈಶಂಕರ್, ಸಮುದಾಯ ಅಧಿಕಾರಿ ಉಮಾವತಿ ಇದ್ದರು.