ಬಜ್ಪೆ: ‘ವನ್ಯಜೀವಿಗಳ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ. ಅವು ನಮ್ಮ ಜೀವನದ ಅವಿಭಾಜ್ಯ ಅಂಗ. ವನ್ಯಜೀವಿಗಳ ಬಗ್ಗೆ ನಾವು ಪ್ರೀತಿ ಬೆಳೆಸಿಕೊಂಡಲ್ಲಿ ಪರಿಸರದ ಮೇಲೆ ಪ್ರಯೋಜನವಾಗಲಿದೆ’ ಎಂದು ಕಾರ್ಕಳ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ (ಡಿಎಫ್ಒ) ರುದ್ರನ್ ಅಭಿಪ್ರಾಯಪಟ್ಟರು.
ಪಿಲಿಕುಳ ನಿಸರ್ಗಧಾಮದಲ್ಲಿ ಪಿಲಿಕುಳ ಜೈವಿಕ ಉದ್ಯಾನ ಮತ್ತು ಜೀವವೈವಿಧ್ಯದ ಪಾಲುದಾರ ಸಂಸ್ಥೆ ಎಂಆರ್ಪಿಎಲ್ ಜಂಟಿಯಾಗಿ ಭಾನುವಾರ ಆಯೋಜಿಸಿದ್ದ ‘ವನ್ಯಜೀವಿ ಸಪ್ತಾಹ-2019' ಹಾಗೂ ವನ್ಯಜೀವಿ ಚಿತ್ರಕಲೆ, ಛಾಯಾಚಿತ್ರ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ರೆಡ್ ಕ್ರಾಸ್ ಸೊಸೈಟಿಯ(ಮಂಗಳೂರು) ಅಧ್ಯಕ್ಷ ಶಾಂತಾರಾಮ್ ಶೆಟ್ಟಿ ನಮ್ಮ ಸುತ್ತಲ ಪರಿಸರದಲ್ಲಿ ವನ್ಯಜೀವಿಗಳ ಮಹತ್ವದ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಹಣಾಧಿಕಾರಿ ಮೇಘನಾ ಆರ್., ಪಿಲಿಕುಳ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಕೆ. ವಿ. ರಾವ್, ಆಡಳಿತ ಸಮಿತಿಯ ಸದಸ್ಯರಾದ ಟಿ. ಸುಬ್ಬಯ್ಯ ಶೆಟ್ಟಿ ಹಾಗೂ ಜಿ. ಎನ್. ಮೋಹನ್, ಕಮಲ್ ಆರ್ಟಿಸ್ಟ್ ಇದ್ದರು.
ಹಿರಿಯ ಕಲಾವಿದ ಗಣೇಶ ಸೋಮಯಾಜಿ ಸೇರಿದ್ದ ಪ್ರೇಕ್ಷಕರ ಎದುರು ವನ್ಯಜೀವಿಗಳ ಚಿತ್ರ ಬಿಡಿಸಿ, ಅನಾವರಣಗೊಳಿಸಿದರು. ಪ್ರಸಾದ್ ಆರ್ಟ್ ಗ್ಯಾಲರಿ ಮಾಲೀಕ ಕೋಟಿಪ್ರಸಾದ ಆಳ್ವ ವಂದಿಸಿದರು. ಪಿಲಿಕುಳ ನಿಸರ್ಗಧಾಮದ ಮಡಿಲಲ್ಲಿ ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ವನ್ಯಜೀವಿ ಚಿತ್ರಕಲಾ ಸ್ಪರ್ಧೆಯಲ್ಲಿ ಹಲವು ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಮಟ್ಟದ ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದರು.