ಮಂಗಳೂರು: ಸಂವಿಧಾನ ದಿನದ ಅಂಗವಾಗಿ ನಗರದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಅಂತರಕಾಲೇಜು ಜಿಲ್ಲಾ ಯುವ ಸಂಸತ್ ಹಮ್ಮಿಕೊಳ್ಳಲಾಗಿತ್ತು.
ಸಿಐಎಲ್ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ನೆಹರೂ ಯುವ ಕೇಂದ್ರ ಹಮ್ಮಿಕೊಂಡ ಯುವ ಸಂಸತ್ನಲ್ಲಿ ವಿವಿಧ ಕಾಲೇಜುಗಳ 60 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಕೋವಿಡ್–19, ಎಪಿಎಂಸಿ ಕಾಯ್ದೆ, ರಾಷ್ಟ್ರೀಯ ಶಿಕ್ಷಣ ನೀತಿ, ಡ್ರಗ್ಸ್, ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಚರ್ಚೆ ನಡೆಸಿದರು.
ಯುವ ಸಂಸತ್ ಉದ್ಘಾಟಿಸಿದ ಲಯನ್ಸ್ ಜಿಲ್ಲಾ ಗವರ್ನರ್ ಡಾ.ಗೀತಾಪ್ರಕಾಶ್, ‘ಸಮಾಜದಲ್ಲಿ ಪರಿವರ್ತನೆ ತರಲು ಯುವ ಜನತೆ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಬೇಕು. ದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಸಂವಿಧಾನದ ಪಾತ್ರ ಮಹತ್ತರವಾಗಿದೆ’ ಎಂದರು.
ಮುಂಬೈ ದಾಳಿಯಲ್ಲಿ ಮೃತಪಟ್ಟವರಿಗೆ ಪುಷ್ಪ ನಮನ ಸಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆರ್. ಸೆಲ್ವಮಣಿ ಮಾತನಾಡಿ, ‘ಮೂಲಭೂತ ಹಕ್ಕುಗಳು, ಕರ್ತವ್ಯಗಳು ಸೇರಿದಂತೆ ಸಂವಿಧಾನವನ್ನು ಸಮಗ್ರವಾಗಿ ಅರಿತುಕೊಂಡಾಗ ದೇಶಕ್ಕೆ ಕೊಡುಗೆ ನೀಡಲು ಸಾಧ್ಯ’ ಎಂದರು. ಸಂವಿಧಾನ ದಿನದ ಪ್ರತಿಜ್ಞೆಯನ್ನು ಅವರು ಬೋಧಿಸಿದರು.
ನೆಹರೂ ಯುವ ಕೇಂದ್ರದ ಸಂಚಾಲಕ ರಘುವೀರ್ ಸೂಟರ್ಪೇಟೆ, ಲಯನ್ಸ್ ಕ್ಲಬ್ನ ವಿಜಯ ವಿಷ್ಣು ಮಯ್ಯ, ಸಂತ ಅಲೋಷಿಯಸ್ ಕಾಲೇಜಿನ ಮೇಘನಾ ಮತ್ತು ಜಸೀಮ್ ಇದ್ದರು.