ಮಂಗಳೂರು: ಯುವಕ್ಷಾತ್ರ ಅಬ್ಬಕ್ಕನಾಡು ಪದಗ್ರಹಣ ಜ.29ರಂದು

ಮಂಗಳೂರು: ರಾಮರಾಜ ಕ್ಷತ್ರಿಯ ಸೇವಾ ಸಂಘದ ಉಳ್ಳಾಲ ವಲಯದ ಅಧೀನದಲ್ಲಿ ‘ಯುವಕ್ಷಾತ್ರ ಅಬ್ಬಕ್ಕನಾಡು’ ಎಂಬ ಯುವ ಸಂಘಟನೆಯನ್ನು ಆರಂಭಿಸಲಾಗಿದ್ದು, ಕೊಲ್ಯ ಕುಲಾಲ ಸಭಾಭವನದಲ್ಲಿ ಇದೇ 29ರಂದು ಇದರ ಪದಗ್ರಹಣ ಮತ್ತು ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.
ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಅಂಕುಶ್ ಕುಮಾರ್ ಹೂಡೆ,‘ಕ್ಷತ್ರಿಯ ಸಮುದಾಯದ ಶ್ರೇಯೋಭಿವೃದ್ಧಿಯಲ್ಲಿ ಯುವಜನರು ತೊಡಗಿಕೊಳ್ಳುವಂತೆ ಉತ್ತೇಜಿಸಲು ಯುವಕ್ಷಾತ್ರ ಅಬ್ಬಕ್ಕನಾಡು ಸಂಘಟನೆಯನ್ನು ಸ್ಥಾಪಿಸಿದ್ದೇವೆ. ರಾಮಕ್ಷತ್ರಿಯರ ಇತಿಹಾಸ, ಜನಪದೀಯ, ಧಾರ್ಮಿಕ ಆಚರಣೆ ಪದ್ಧತಿಗಳ ತಿಳಿವಳಿಕೆ ಮೂಡಿಸಲು, ಸಾಂಸ್ಕೃತಿಕ, ಕ್ರೀಡೆ, ಚಟುವಟಿಕೆಯಲ್ಲಿ ಭಾಗವಹಿಸಲು, ರಾಜಕೀಯವಾಗಿ ಶಕ್ತಿ ಪಡೆಯಲು ಸಂಘಟನೆ ನೆರವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ, ಉದ್ಯೋಗ ಕೌಶಲ, ವೃತ್ತಿಪರ ಕೌಶಲ ಪಡೆದು ಸ್ವಂತ ಉದ್ಯೋಗ ಆರಂಭಿಸಲು ತರಬೇತಿ ಕಲ್ಪಿಸಲಿದೆ’ ಎಂದರು.
ಸಂಘಟನೆಯ ಕಾರ್ಯದರ್ಶಿ ಯೋಗೀಶ್ ಮಲ್ಲಿಗೆಮಾಡು, ‘ಯುವಜನರು ತಪ್ಪುದಾರಿ ಅನುಸರಿಸದಂತೆ ತಡೆಯುವುದು, ಸಾಮಾಜಿಕ ಚಟುವಟಿಕೆ ಮೂಲಕ ಪರಸ್ಪರ ನೋವು–ನಲಿವುಗಳಿಗೆ ಸ್ಪಂದಿಸುವಂತೆ ಪ್ರೇರೇಪಿಸುವುದು ನಮ್ಮ ಉದ್ದೇಶ. ರಾಮಕ್ಷತ್ರಿಯ ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಪ್ರಮೋದ್ ನಾಯಕ್ ಅವರು ಇದೇ 29ರಂದು ಸಂಜೆ 4ಕ್ಕೆ ಸಂಘಟನೆಯನ್ನು ಉದ್ಘಾಟಿಸುವರು. ಉಳ್ಳಾಲ ವಲಯದ ರಾಮರಾಜ ಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಸೀತಾರಾಮ ಕೊಪ್ಪಲು ಅಧ್ಯಕ್ಷತೆ ವಹಿಸುವರು. ಡಾ.ಸತ್ಯಕೃಷ್ಣ ಭಟ್ ಆಶೀರ್ವಚನ ನೀಡುವರು. ಬೆಂಗಳೂರಿನ ಆಕಾಶ್ ವೈದ್ಯಕೀಯ ವಿಶ್ವವಿದ್ಯಾಲಯದ ವೈದ್ಯಕೀಯ ಅಧೀಕ್ಷಕ ಡಾ.ಬ್ರಿಜೇಶ್ ಕೆ. ಭಾಗವಹಿಸುವರು. ಮಧ್ಯಾಹ್ನ 3ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಸಿನಿಮಾ ನಟ ರಂಜನ್, ರಾಷ್ಟಮಟ್ಟದ ಕಿಕ್ ಬಾಕ್ಸಿಂಗ್ ಪಟು ಕಾರ್ತಿಕ್ ಕೆ. ಅವರನ್ನು ಸನ್ಮಾನಿಸಲಾಗುತ್ತದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಅಮಿತ್ ರಾಜ್ ಬೇಕಲ್, ಉಪಾಧ್ಯಕ್ಷ ಚಂದನ ಕೋಟೆಕಾರ್ ಹಾಗೂ ಜೊತೆ ಕಾರ್ಯದರ್ಶಿ ನಿತಿನ್ ರಾಜ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.