ವಿಜಯಪುರ: ‘ತಾಳೆಗರಿಗಳಲ್ಲಿ ಬರೆದ ವಚನಗಳನ್ನು ಸಂಗ್ರಹಿಸಿದ ಕೀರ್ತಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ’ ಎಂದು ಮಹಾನಂದಾ ಬಿರಾದಾರ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಭಾ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸೋಮವಾರ ಆಯೋಜಿಸಿದ್ದ ಲಿಂ.ಗುರುಬಸಪ್ಪ ಇಂಗಳೇಶ್ವರ, ಲಿಂ.ಗುರಸಂಗವ್ವ ಇಂಗಳೇಶ್ವರ ಮತ್ತು ಡಾ.ಫ.ಗು.ಹಳಕಟ್ಟಿ ದತ್ತಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮೊದಲು 50 ವಚನಕಾರರನ್ನು ಗುರುತಿಸಲಾಗಿತ್ತು. ಹಳಕಟ್ಟಿ ಅವರು ಕಾರ್ಯ ಪ್ರಾರಂಭಿಸಿದ ಮೇಲೆ ಸುಮಾರು 250 ವಚನಕಾರರನ್ನು ಗುರುತಿಸಲಾಯಿತು. ಸಾವಿರಾರು ತಾಡೋಲೆಗಳನ್ನು ಸಂಗ್ರಹಿಸಿ, ಮುದ್ರಿಸಿ ಅವುಗಳನ್ನು ಸಮಾಜಕ್ಕೆ ಒದಗಿಸುವ ಕಾರ್ಯವನ್ನು ಹಳಕಟ್ಟಿ ಅವರು ಮಾಡಿದ್ದಾರೆ’ ಎಂದರು.
ಪ್ರಾಚಾರ್ಯ ಎಸ್.ಬಿ.ಸಾವಳಸಂಗ, ದತ್ತಿ ದಾನಿ, ಹಿರಿಯ ಸಾಹಿತಿ ಮಹಾಂತ ಎನ್.ಗುಲಗಂಜಿ, ಸಿದ್ದಲಿಂಗಪ್ಪ ಹದಿಮೂರ ಮಾತನಾಡಿದರು.
ದತ್ತಿ ಸಂಚಾಲಕ ರವೀಂದ್ರ ಮೇಡೆಗಾರ ಸ್ವಾಗತಿಸಿದರು. ಮೋಹನ ಕಟ್ಟಿಮನಿ ನಿರ್ವಹಿಸಿದರು.
ವಿದ್ಯಾವತಿ ಅಂಕಲಗಿ, ಎಸ್.ಕೆ.ಕನಾಳ, ಜಂಬುನಾಥ ಕಂಚ್ಯಾಣಿ ಇದ್ದರು.