ದಾವಣಗೆರೆ: ಬೈಕ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹ 14.20 ಲಕ್ಷ ನಗದನ್ನು ನಗರದ ಬೇತೂರು ರಸ್ತೆಯ ಚೆಕ್ಪೋಸ್ಟ್ನಲ್ಲಿ ಶುಕ್ರವಾರ ಸ್ಟ್ಯಾಟಿಕ್ಸ್ ಸರ್ವೆಲೆನ್ಸ್ ಟೀಮ್ (ಎಸ್.ಎಸ್.ಟಿ) ವಶಪಡಿಸಿಕೊಂಡಿದೆ.
ಆರ್.ಕೆ. ಬಸವರಾಜ್ ಅವರು ಹೊಂಡ ಶೈನ್ ಬೈಕ್ನಲ್ಲಿ ಸಾಗುತ್ತಿದ್ದಾಗ ಚೆಕ್ಪೋಸ್ಟ್ನಲ್ಲಿ ತಡೆದು ನಿಲ್ಲಿಸಲಾಗಿದೆ. ಅವರ ಲ್ಯಾಪ್ಟಾಪ್ ಬ್ಯಾಗ್ನಲ್ಲಿ ₹ 14.20 ಲಕ್ಷ ನಗದು ಪತ್ತೆಯಾಗಿದೆ. ಇದಕ್ಕೆ ದಾಖಲೆಗಳನ್ನು ನೀಡುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿ ಮಣಿಕರಾಜ್ ಅವರ ವಶಕ್ಕೆ ಒಪ್ಪಿಸಲಾಗಿದೆ.
‘ಆ್ಯಪ್ ಮೂಲಕ ಪಿಗ್ಮಿ ಸಂಗ್ರಹಿಸಿದ ಹಣ ಎಂದು ಬಸವರಾಜ ಪ್ರತಿಪಾದಿಸಿದರು. ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ನೀಡುವಲ್ಲಿ ಅವರು ವಿಫಲರಾಗಿರುವ ಹಿನ್ನೆಲೆಯಲ್ಲಿ ಹಣವನ್ನು ಜಪ್ತಿ ಮಾಡಲಾಗಿದೆ’ ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ವೀರೇಂದ್ರ ಕುಂದಗೋಳ ಮಾಹಿತಿ ನೀಡಿದರು.
ಎಸ್.ಎಸ್.ಟಿ. ತಂಡದ ಮುಖ್ಯಸ್ಥ ಸುರೇಂದ್ರ ನಾಯ್ಕ ಬಿ., ಸಹಾಯಕ ಎಲ್. ಗಂಗಾಧರ್, ಹೆಡ್ ಕಾನ್ಸ್ಟೆಬಲ್ ಬಸವರಾಜ, ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥ ಟಿ.ಆರ್. ರವಿ ಹಾಜರಿದ್ದರು.