ದಾವಣಗೆರೆ: ಜಿಲ್ಲೆಯಲ್ಲಿ 12 ಮಂದಿ ಯಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಅದರಲ್ಲಿ 6 ಮಂದಿ ಗುಜರಾತ್ನ ಅಹಮದಾಬಾದ್ನಿಂದ ಬಂದವರು.
ಅಹಮದಾಬಾದ್ನಿಂದ ಬಂದ ಎಲ್ಲ ಆರು ಮಂದಿ ಪುರುಷರಾಗಿದ್ದು, 18 ವರ್ಷ(ಪಿ.915), 23 ವರ್ಷ (916),
40 ವರ್ಷದ ಇಬ್ಬರು (ಪಿ. 917, 918),20 ವರ್ಷದ ಇಬ್ಬರು (ಪಿ.919, 920) ಸೇರಿದ್ದಾರೆ.
23 ವರ್ಷದ ಯುವಕ (ಪಿ.921) ಮತ್ತು 29 ವರ್ಷದ ಯುವಕ (ಪಿ.922) ಈ ಇಬ್ಬರಿಗೆ ಎಸ್ಪಿಎಸ್ ನಗರದ 53 ವರ್ಷದ ಮಹಿಳೆಯ (ಪಿ.695) ಸಂಪರ್ಕದಿಂದ ಸೋಂಕು ಬಂದಿದೆ.
17 ವರ್ಷದ ಯುವತಿ (ಪಿ.914), 45 ವರ್ಷದ ವ್ಯಕ್ತಿ (ಪಿ.923), 28 ವರ್ಷದ ಯುವಕ (ಪಿ.924) ಮತ್ತು 9 ವರ್ಷದ ಬಾಲಕಿ (ಪಿ. 925) ಈ ನಾಲ್ವರಿಗೆ ಜಾಲಿನಗರದ ಮಹಿಳೆಯ (ಪಿ. 696) ಸಂಪರ್ಕದಿಂದ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಈ ವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 83ಕ್ಕೆ ಏರಿದೆ. ಅದರಲ್ಲಿ ಇಬ್ಬರು ಗುಣಮುಖರಾಗಿದ್ದರೆ, ನಾಲ್ವರು ಮೃತಪಟ್ಟಿದ್ದಾರೆ. ಸದ್ಯ 77 ಸಕ್ರಿಯ ಪ್ರಕರಣಗಳಿವೆ.
ಹುಣಸಘಟ್ಟಕ್ಕೆ ಬರುತ್ತಿದ್ದವರು: ಅಹಮದಾಬಾದ್ನಿಂದ ಒಂದು ತಂಡ ಶಿವಮೊಗ್ಗಕ್ಕಾಗಿ ಬಂದಿತ್ತು. ಅದರಲ್ಲಿ ಕೆಲವರು ಶಿವಮೊಗ್ಗದವರು. ಏಳು ಮಂದಿ ಹೊನ್ನಾಳಿ ತಾಲ್ಲೂಕಿನ ಹುಣಸಘಟ್ಟಕ್ಕೆ ಬರುತ್ತಿದ್ದಾಗ ನಮ್ಮ ತಂಡ ಅವರನ್ನು ದಾವಣಗೆರೆಗೆ ಕರೆತಂದಿತ್ತು. 9ರಂದು ಅವರು ಬಂದಿದ್ದು, 10ರಂದು ಸ್ವಾಬ್ ಸಂಗ್ರಹಿಸಿ ಬೆಂಗಳೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆರು ಮಂದಿಯ ಫಲಿತಾಂಶ ಇಂದು ಬಂದಿದೆ. ಆ ಆರೂ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಒಬ್ಬರ ಫಲಿತಾಂಶ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದರು.
ಈ ಆರು ಮಂದಿ ಅಲ್ಲದೇ ಎಸ್ಪಿಎಸ್ ನಗರದ ಮಹಿಳೆಯಿಂದ ನಾಲ್ಕು ಮಂದಿಗೆ, ಜಾಲಿನಗರದ ಮಹಿಳೆ
ಯಿಂದ ಇಬ್ಬರಿಗೆ ಸೋಂಕು ಬಂದಿದೆ. ಜಾಲಿನಗರ ಮತ್ತು ಎಸ್ಪಿಎಸ್ ನಗರದ ಆ ಮಹಿಳೆಯರಿಬ್ಬರಿಗೆ ಇನ್ಫ್ಲುವೆಂಜಾ ಲೈಕ್ ಇಲ್ನೆಸ್ (ಐಎಲ್ಐ) ಎಂದು ಗುರುತಿಸಲಾಗಿದೆ. ಮೂಲ ಪತ್ತೆಯಾಗದೇ ಇದ್ದಾಗ ರೋಗವನ್ನಷ್ಟೇ ಗುರುತಿಸಲಾಗುತ್ತದೆ. ಕಂಟೈನ್ಮೆಂಟ್ ವಲಯ ದಲ್ಲಿ ಸಮುದಾಯದಿಂದ ಬಂದಿರುವ ಸಾಧ್ಯತೆ ಇದೆ. ಆರು ಮಂದಿಯ ಪ್ರಥಮ ಮತ್ತು ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದುವಿವರ ನೀಡಿದರು.
ಸೋಮವಾರ ಮೂವರಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. 33 ವರ್ಷದ ಯುವಕನಿಗೆ (ಪಿ.850) ಸಂಬಂಧಿಸಿದಂತೆ ಪ್ರಥಮ ಸಂಪರ್ಕದ 8 ಮತ್ತು ದ್ವಿತೀಯ ಸಂಪರ್ಕದ 16 ಮಂದಿಯನ್ನು ಗುರುತಿಸಲಾಗಿದೆ. 30 ವರ್ಷದ ಮಹಿಳೆಗೆ (ಪಿ.851) ಸಂಬಂಧಿಸಿದಂತೆ ಪ್ರಥಮ ಸಂಪರ್ಕದ 12 ಮತ್ತು ದ್ವಿತೀಯ ಸಂಪರ್ಕದ 21 ಮಂದಿಯನ್ನು ಹಾಗೀ 56 ವರ್ಷದ ಮಹಿಳೆಗೆ (ಪಿ.852) ಸಂಬಂಧಿ ಸಿದಂತೆ ಪ್ರಥಮ ಸಂಪರ್ಕದ 9 ಮತ್ತು ದ್ವಿತೀಯ ಸಂಪರ್ಕದ 21 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಎಲ್ಲರ ಸ್ವಾಬ್ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಹಲವು ಹೋಟೆಲ್, ಲಾಡ್ಜ್ಗಳಲ್ಲಿ ಹಲವರನ್ನು ಕ್ವಾರಂಟೈನ್ ಮಾಡಲಾಗಿದೆ. ಸರ್ಕಾರ ನಿಗದಿ ಪಡಿಸಿದ ದರವನ್ನು ಆ ಹೋಟೆಲ್, ಲಾಡ್ಜ್ಗಳಿಗೆ ನೀಡಲಾಗುವುದು ಎಂದರು.
ಅಹಮದಾಬಾದ್ನಿಂದ ಬಂದ 22 ಮಂದಿ: ಡಿ.ಸಿ
ಅಹಮದಾಬಾದ್ನಿಂದ ಮಂಗಳವಾರ ಜಿಲ್ಲೆಗೆ ಮತ್ತೆ 22 ಮಂದಿ ಬಂದಿದ್ದಾರೆ. ಅದರಲ್ಲಿ ಒಬ್ಬರನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. 17 ಮಂದಿಯನ್ನು ಕೆರೆಬಿಳಚಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಉಳಿದವರನ್ನು ದಾವಣಗೆರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಶಿವನಗರದಲ್ಲಿ ಸಮಸ್ಯೆ ಇಲ್ಲ: ಎಸ್ಪಿ
‘ಅಜ್ಮೀರ್ನಿಂದ ಬಂದ ಯುವಕನ (ಪಿ. 847) ಮನೆ ಶಿವನಗರದಲ್ಲಿ ಇರುವುದರಿಂದ ಅದನ್ನು ಕಂಟೈನ್ಮೆಂಟ್ ಝೋನ್ ಮಾಡಲು ನಿರ್ಧರಿಸಲಾಗಿತ್ತು. ಅಲ್ಲಿ ಸೀಲ್ಡೌನ್ ಮಾಡಿದರೆ ಸಮಸ್ಯೆಯಾಗುತ್ತದೆ ಎಂಬುದು ಸ್ಥಳೀಯರ ಭಾವನೆಯಾಗಿತ್ತು. ಅದಕ್ಕಾಗಿ ಕಂಟೈನ್ಮೆಂಟ್ ಝೋನ್ ಬೇಡ ಎಂದು ಸೋಮವಾರ ವಿರೋಧಿಸಿದ್ದರು. ನಾನು, ಜಿಲ್ಲಾಧಿಕಾರಿ, ಇತರ ಅಧಿಕಾರಿಗಳ ಜತೆಗೆ ಅಲ್ಲಿಗೆ ಮಂಗಳವಾರ ಭೇಟಿ ನೀಡಿ ಅವರ ಕುಂದುಕೊರತೆ ಆಲಿಸಿದ್ದೇವೆ. ಕಂಟೈನ್ಮೆಂಟ್ ಝೋನ್ ಯಾಕೆ ಮಾಡಬೇಕು ಎಂಬುದನ್ನು ಅವರಿಗೆ ವಿವರಿಸಿದ್ದೇವೆ. ಈಗ ಸೀಲ್ಡೌನ್ ಮಾಡಲಾಗಿದೆ. ಯಾವುದೇ ಸಮಸ್ಯೆ ಇಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.