ದಾವಣಗೆರೆ: ಯುವತಿಯ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ 15 ವರ್ಷ ಶಿಕ್ಷೆ ಹಾಗೂ ₹ 26 ಸಾವಿರ ದಂಡ ವಿಧಿಸಿ ಇಲ್ಲಿನ1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ.
ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ವೀರೇಶ್ ಶಿಕ್ಷೆಗೆ ಗುರಿಯಾದ ಅಪರಾಧಿ.
ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ವೀರೇಶ್, ಪ್ರೀತಿಸುವ ನಾಟಕವಾಡಿ ಆಕೆಯ ಪೋಷಕರು ಹೊರಗಡೆ ಹೋದಾಗ ಅತ್ಯಾಚಾರವೆಸಗಿದ್ದಾನೆ.ಗರ್ಭಿಣಿಯಾದ ಯುವತಿ ಮದುವೆಯಾಗುವಂತೆ ಕೇಳಿದಾಗ ಆರೋಪಿ ಆಕೆಗೆ ಜೀವ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಗ್ರಾಮಾಂತರ ವೃತ್ತದಲ್ಲಿ ಪ್ರಕರಣ ದಾಖಲಾಗಿ ಎಸ್ಐ ಮಂಜುನಾಥ ಅವರು ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆಂಗಬಾಲಯ್ಯ ಅವರು, ಕಲಂ 376, 420, 506ರಡಿ ಅಪರಾಧಿಗೆ ಒಟ್ಟು 15 ವರ್ಷ ಶಿಕ್ಷೆ ಹಾಗೂ ₹ 26 ಸಾವಿರ ದಂಡ ವಿಧಿಸಿದ್ದಾರೆ. ದಂಡ ಕೊಡಲು ತಪ್ಪಿದ್ದಲ್ಲಿ 1 ವರ್ಷ 7 ತಿಂಗಳು ಹೆಚ್ಚುವರಿಯಾಗಿ ಸೆರೆವಾಸ ಅನುಭವಿಸಬೇಕು ಎಂದು ಆದೇಶಿಸಿದ್ದಾರೆ.
ದಂಡದ ಮೊತ್ತದಲ್ಲಿ ₹ 20 ಸಾವಿರವನ್ನು ಪಿರ್ಯಾದುದಾರರಿಗೆ ಪರಿಹಾರವಾಗಿ ಕೊಡಬೇಕು. ಉಳಿದ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬೇಕು. ನ್ಯಾಯಾಂಗ ಬಂಧನದಲ್ಲಿರುವ ಅವಧಿಯನ್ನು ಸೆಟ್ ಆಫ್ ಮಾಡಬೇಕು ಎಂದು ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದ ಮಂಡಿಸಿದರು.