ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಮಾಸಡಿ ಗ್ರಾಮದ ಬಳಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹ 2.40 ಲಕ್ಷ ಮೌಲ್ಯದ 163 ಕ್ವಿಂಟಲ್ ಪಡಿತರ ಅಕ್ಕಿಯನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದ ಕಡೆಯಿಂದ ಮಾಸಡಿ ಗ್ರಾಮದ ಮೂಲಕ ಹೊನ್ನಾಳಿ ಪಟ್ಟಣದ ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದ್ದರಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಹಾಗೂ ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಸಂತೋಷ ಕೆ.ಎಂ.,ಹೊನ್ನಾಳಿ ಸಿಪಿಐ ದೇವರಾಜ್ ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು, ಲಾರಿಯನ್ನು ಜಪ್ತಿ ಮಾಡಿದರು. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪಿಎಸ್ಐ ಬಸವರಾಜ ಬಿರಾದರ, ಸಿಬ್ಬಂದಿಯಾದರವಿ ಈಶ್ವರಪ್ಪ, ದೊಡ್ಡಬಸಪ್ಪ, ನಾಗರಾಜ್, ಯೋಗೇಶ, ಮೌನೇಶಾಚಾರಿ ಮತ್ತು ಆಹಾರ ಆಹಾರ ಶಿರಸ್ತೇದಾರರಾದ ಸುನೀತಾ ಕೆ.ಪಿ, ಆಹಾರ ನಿರೀಕ್ಷಕರಾದ ಮಂಜುನಾಥ ಎಚ್.ಸಿ. ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕಾರ ಬಡವರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಪಡೆಯುವ ಉದ್ದೇಶದಿಂದ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಹೊನ್ನಾಳಿ ಪಟ್ಟಣದ ಕಡೆಗೆ ಸಾಗಿಸಲಾಗುತ್ತಿತ್ತು.