ಹರಪನಹಳ್ಳಿ: ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಮುಂದಿನ ಐದು ವರ್ಷದಲ್ಲಿ 22 ಸಾವಿರ ಮನೆಗಳ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ರಾಘವೇಂದ್ರ ಔರಾದ್ಕಾರ್ ತಿಳಿಸಿದ್ದಾರೆ.
ಪಟ್ಟಣಕ್ಕೆ ಶುಕ್ರವಾರ ಭೇಟಿ ನೀಡಿ ಪೊಲೀಸ್ ಠಾಣೆ ಶಿಥಿಲ ಕಟ್ಟಡವನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಇಲಾಖೆಗೆ ಸಂಬಂಧಪಟ್ಟ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅದು ಡಿಜಿ, ಐಜಿಪಿ ಹಂತದಲ್ಲಿ ನಡೆಯುತ್ತಿದೆ. ಪ್ರತಿ ಸಭೆಯಲ್ಲೂ ವರದಿ ಅನುಷ್ಠಾನಕ್ಕೆ ಮನವಿ ಮಾಡುತ್ತಿದ್ದೇನೆ. ಆದರೆ ಅದು ಎಲ್ಲಿ ವಿಳಂಬವಾಗುತ್ತಿದೆ ಎಂಬುದು ನನಗೂ ತಿಳಿಯುತ್ತಿಲ್ಲ’ ಎಂದು ಹೇಳಿದರು.
ರಾಜ್ಯದ ಪೊಲೀಸರಿಗೆ ಶೇ 47 ವಸತಿಗೃಹಗಳ ಕೊರತೆಯಿದೆ. 2015ರಲ್ಲಿ 11 ಸಾವಿರ ಮನೆ ನಿರ್ಮಾಣದ ಯೋಜನೆ ತಂದಿದ್ದರು. ಅದರಲ್ಲಿ 8 ಸಾವಿರ ಮನೆ ನಿರ್ಮಿಸಿ ಹಸ್ತಾಂತರ ಮಾಡಲಾಗಿದೆ. 3 ಸಾವಿರ ಮನೆ ನಿರ್ಮಾಣ ಪ್ರಗತಿಯಲ್ಲಿದ್ದು, 2020ರ ವೇಳೆಗೆ ಪೂರ್ಣಗೊಳ್ಳುತ್ತವೆ. ಮುಂದಿನ ಐದು ವರ್ಷದಲ್ಲಿ ನಿರ್ಮಿಸಿಲು ತಯಾರಿಸಿದ ಕ್ರಿಯಾಯೋಜನೆಯಲ್ಲಿ ದುರಸ್ತಿ ಮಾಡುವ ಕಟ್ಟಡಗಳು ಸೇರಿವೆ. ದುರಸ್ತಿ ಕಟ್ಟಡಗಳಿಗೆ ಅನುದಾನ ನಿಗದಿಯಾಗಿದೆ. ಇನ್ನೂ ಮುಂಜೂರಾಗಿಲ್ಲ ಎಂದು ಮಾಹಿತಿ ನೀಡಿದರು.
ಬಹಳ ಕಡೆಗೆ ಪೊಲೀಸ್ ವಸತಿ ಗೃಹಗಳು, ಠಾಣಾ ಕಟ್ಟಡಗಳು ದುರಸ್ತಿಯಲ್ಲಿವೆ. ಈ ಬಗ್ಗೆ ಎಸ್ಪಿಗಳಿಂದ ವರದಿ ಪಡೆಯಲಾಗಿದೆ. ಪರಿಶೀಲನೆ ಬಳಿಕ ದುರಸ್ತಿ ಮಾಡಬೇಕಾ ಅಥವಾ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಬೇಕಾ ಎಂಬುದನ್ನು ನಿರ್ಧರಿಸಲಾಗುವುದು. ಹರಪನಹಳ್ಳಿ ಠಾಣೆಯ ಬಗ್ಗೆ ಪ್ರಸ್ತಾವನೆ ತರಿಸಿಕೊಂಡು ಹೊಸಕಟ್ಟಡ ನಿರ್ಮಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಮುನಿರಾಬಾದ್, ಹಗರಿಬೊಮ್ಮನಹಳ್ಳಿ ಠಾಣೆಗಳಿಗೂ ಭೇಟಿ ನೀಡಿ ಪರಿಶೀಲಿಸಿರುವುದಾಗಿ ಹೇಳಿದರು.
ಹರಪನಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಗೌರವರಕ್ಷೆ ಸಲ್ಲಿಸಿದರು. ಡಿವೈಎಸ್ಪಿ ಡಿ. ಮಲ್ಲೇಶ್, ಸಿಪಿಐ ಕೆ. ಕುಮಾರ, ಪಿಎಸ್ಐ ಶ್ರೀಧರ ಅವರೂ ಇದ್ದರು.