ನವದೆಹಲಿ: ದೇಶದಲ್ಲಿ ‘ಒಂದು ದೇಶ–ಒಂದು ಶೈಕ್ಷಣಿಕ ಮಂಡಳಿ’ ನೀತಿ ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಬಿಜೆಪಿ ನಾಯಕ ಅಶ್ವಿನ್ ಕುಮಾರ್ ಉಪಾಧ್ಯಾಯ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
‘ದೇಶದ ಎಲ್ಲ ಮಕ್ಕಳಿಗೂ ಯಾವುದೇ ತಾರತಮ್ಯವಿಲ್ಲದೆ ಒಂದೇ ಗುಣಮಟ್ಟದ ಶಿಕ್ಷಣ ದೊರೆಯಬೇಕು. ದೇಶಕ್ಕೊಂದು, ಆಯಾ ರಾಜ್ಯಕ್ಕೊಂದು ಶೈಕ್ಷಣಿಕ ಮಂಡಳಿ ಇದ್ದರೆ ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ನೀಡಲು ಸಾಧ್ಯವಿಲ್ಲ’ ಎಂದು ಅವರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
‘ಸರ್ಕಾರಿ ಶಾಲೆಗಳಲ್ಲಿ ಆಧುನಿಕ ಶೈಕ್ಷಣಿಕ ಸೌಕರ್ಯಗಳಿಲ್ಲ. ಖಾಸಗಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಈ ತಾರತಮ್ಯವನ್ನು ನಿವಾರಿಸಬೇಕೆಂದರೆ ಸಮಾನ ಶಿಕ್ಷಣ ಸಿಗಬೇಕು. ಒಂದು ದೇಶ–ಒಂದು ಶೈಕ್ಷಣಿಕ ಮಂಡಳಿಯಿಂದ ಇದು ಸಾಧ್ಯವಾಗುತ್ತದೆ’ ಎಂದು ಅವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.