ಹರಿಹರ: ಇಲ್ಲಿನ ನಗರಸಭೆ ಬಿಲ್ ಕಲೆಕ್ಟರ್ ಜಿಗಳಿ ಮಂಜಪ್ಪ ನಿವೇಶನದ ಖಾತೆ ಬದಲಾಯಿಸಲು ಲಂಚ ಪಡೆಯುತ್ತಿರುವ ವೇಳೆ ಬುಧವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.
ದಾವಣಗೆರೆಯ ರಾಘವೇಂದ್ರ ಎಂಬುವರು ಹರಿಹರದ ಹರ್ಲಾಪುರದ ಲ್ಲಿರುವ ತಮ್ಮ ನಿವೇಶನದ ಖಾತೆ ಬದಲಾಯಿಸಲು ಹಾಗೂ ಕಂದಾಯ ನಿಗದಿಗೆ ನಗರಸಭೆಗೆ ಅರ್ಜಿ ಸಲ್ಲಿಸಿದ್ದರು. ಹತ್ತಾರು ಬಾರಿ ಅಲೆದಾಡಿದರೂ ಕೆಲಸ ಆಗಿರಲಿಲ್ಲ.
ಜೆ ವಿಭಾಗದ ಬಿಲ್ ಕಲೆಕ್ಟರ್ ಜಿಗಳಿ ಮಂಜಪ್ಪ ಕಂದಾಯ ಬಾಕಿ ಪಾವತಿಸುವುದು ಸೇರಿ ಖಾತೆ ಬದಲಾವಣೆ ಮಾಡಿಕೊಡಲು ₹ 1.70 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ರಾಘವೇಂದ್ರ ಅವರು ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿ, ಲಂಚದ ಮೊದಲು ಕಂತಾಗಿ ₹ 1ಲಕ್ಷ ನೀಡಲು ಮುಂದಾದಾಗ ನಗರದ ಶಿವ ಡಾಬಾ ಹೋಟಲ್ನ ಫ್ಯಾಮಿಲಿ ವಿಭಾಗಕ್ಕೆ ಕರೆಯಿಸಿಕೊಂಡ ಜಿಗಳಿ ಮಂಜಪ್ಪ ಅಲ್ಲಿ ಲಂಚದ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಜಿಗಳಿ ಮಂಜಪ್ಪನನ್ನು ವಶಕ್ಕೆ ಪಡೆದು ನಗರಸಭೆಗೆ ಕರೆತಂದು ಕೆಲ ಸಮಯ ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು ನಂತರ ಬಂಧಿಸಿ ದಾವಣಗೆರೆ ಕಚೇರಿಗೆ ಕರೆದು ಕೊಂಡು ಹೋದರು.
ಎಸಿಬಿ ಡಿವೈಎಸ್ಪಿ ಮಂಜುನಾಥ್, ಅಧಿಕಾರಿಗಳಾದ ರವೀಂದ್ರ ಕುಬೇರಘಟ್ಟ, ಮಧುಸೂಧನ್, ಸಿಬ್ಬಂದಿ ಬಸವರಾಜ್, ಮೋಹನ್, ಕಲ್ಲೇಶ್, ವೀರೇಶ್, ಧನರಾಜ್, ಉಮೇಶ್ ಅವರು ದಾಳಿಯ ವೇಳೆ ಇದ್ದರು.