ತ್ಯಾವಣಿಗೆ: ಕಬ್ಬಳ-ದೊಡ್ಡಘಟ್ಟ ನಡುವೆ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನಿರಾಕರಣೆ ಆರೋಪ ಸಂಬಂಧ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಿಎಚ್ಒ ಡಾ. ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಗಾಯಾಳುಗಳನ್ನು ಆಸ್ಪತ್ರೆ ಮುಂಭಾಗ ಹಾಕಿ ಹೋಗಿರುವುದು ಸರಿಯಲ್ಲ. ಸಾರ್ವಜನಿಕರು ಸಹಾಯ ಮಾಡದೇ ಮೊಬೈಲ್ನಲ್ಲಿ ವಿಡಿಯೊ, ಫೋಟೊ ತೆಗೆಯುವುದರ ಬದಲು ಗಾಯಾಳುಗಳ ರಕ್ಷಣೆಗೆ ಧಾವಿಸಿದ್ದರೆ ಜೀವ ಉಳಿಸಬಹುದಿತ್ತು’ ಎಂದರು.
ಆಂಬುಲೆನ್ಸ್ ವಾಹನ ಸಿಬ್ಬಂದಿ ರಜೆಯಲ್ಲಿದ್ದರಿಂದ ಸಕಾಲಕ್ಕೆ ಆಂಬುಲೆನ್ಸ್ ದೊರೆಯುವುದು ವಿಳಂಬವಾಗಿದೆ. ಆಸ್ಪತ್ರೆಗೆ ಶೀಘ್ರವಾಗಿ ಸ್ಟಾಫ್ ನರ್ಸ್ ಆಯೋಜಿಸಲಾಗುವುದು. ಮುಂದಿನ ದಿನಗಳಲ್ಲಿ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆಸ್ಪತ್ರೆಯಲ್ಲಿ ಎಲ್ಲಾ ಸಂದರ್ಭಗಳಲ್ಲಿ ವೈದ್ಯರು, ಶುಶ್ರೂಷಕಿಯರು ಇರುವುದಿಲ್ಲ. ಅಪಘಾತದಂತಹ ವೇಳೆ ಸಮುದಾಯದವರು ಸಹಾಯ ಮಾಡಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಪ್ರಭು, ಎಂ.ಬಿ. ಸುರೇಶ್, ವೈದ್ಯಾಧಿಕಾರಿ ಡಾ. ಚನ್ನಬಸಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೋವಿಂದಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಇದ್ದರು.