ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಬಂದಿದೆ. ಆದರೆ, ಅಧಿಕ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ವಿಷಯ ವಾರು ಉತ್ತೀರ್ಣರಾಗಿದ್ದರೂ ಅನುತ್ತೀರ್ಣ ಎಂದು ಪ್ರಕಟಗೊಂಡಿದೆ. ಪರೀಕ್ಷೆಗೆ ಹಾಜರಾಗಿದ್ದರೂ ಕೆಲವು ವಿದ್ಯಾರ್ಥಿಗಳಿಗೆ ಗೈರು ಎಂದು ತೋರಿಸುತ್ತಿದೆ. ಇಂಥ ಗೊಂದಲಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್ಒ) ಗುರುವಾರ ಜಯದೇವ ಸರ್ಕಲ್ನಲ್ಲಿ ಪ್ರತಿಭಟನೆ ಮಾಡಿ ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಿದೆ.
ಹೊಸ ಶಿಕ್ಷಣ ನೀತಿ ಜಾರಿ ಆದಾಗಿನಿಂದಲೂ ವಿದ್ಯಾರ್ಥಿಗಳು ಒಂದಲ್ಲ ಒಂದು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ತೊಂದರೆಗಳ ನಡುವೆ ಅವರು ಪರೀಕ್ಷೆಯನ್ನು ಬರೆದಿದ್ದರು. ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಈಗ ಫಲಿತಾಂಶ ಬಂದಾಗ ಮತ್ತೆ ಗೊಂದಲಗಳಾಗಿವೆ. ಉತ್ತೀರ್ಣರಾಗಿದ್ದರೂ ಅನುತ್ತೀರ್ಣ, ಹಾಜರಾಗಿದ್ದರೂ ಗೈರು ಎಂದೆಲ್ಲ ಬಂದಿರುವ ಬಗ್ಗೆ ವಿಶ್ವವಿದ್ಯಾಲಯಕ್ಕೆ ತಿಳಿಸಿದ್ದರೂ ಸರಿಪಡಿಸಿಲ್ಲ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯವು ವಿದ್ಯಾರ್ಥಿ ಗಳ ಪರವಾಗಿ ನಿಂತು ಫಲಿತಾಂಶ ಪ್ರಕಟಣೆಯಲ್ಲಿ ಆಗಿರುವ ಗೊಂದಲ ಗಳನ್ನು ಪರಿಹರಿಸಬೇಕು. ಒಂದು ಸಮಿತಿ ಮಾಡಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ, ಪುಷ್ಪಾ, ಕಾವ್ಯ, ವಿದ್ಯಾರ್ಥಿಗಳಾದ ನವಾಜ್, ಅಭಿ, ಅಭಿಷೇಖ್ ಕೆ., ಕೀರ್ತಿ, ಪ್ರಜ್ವಲ್, ಮಧು ಮತ್ತಿತರರು ಇದ್ದರು.