ದಾವಣಗೆರೆ: ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಇಲ್ಲಿನ 13ನೇ ವಾರ್ಡಿನಲ್ಲಿ ಪಾಲಿಕೆ ಉಪ ಮೇಯರ್ ಸೌಮ್ಯ ನರೇಂದ್ರಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ನೇತೃತ್ವದಲ್ಲಿ ಪಾದಪೂಜೆ ನಡೆಯಿತು.
ಪೌರಕಾರ್ಮಿಕರ ಪಾದ ತೊಳೆದು ಅವರಿಗೆ ಪೂಜೆ ಸಲ್ಲಿಸಿದರು. ಅಲ್ಲದೇ ಅವರಿಗೆ ಬಟ್ಟೆ, ಸೀರೆ ಹಾಗೂ ಮಾಸ್ಕ್ಗಳನ್ನು ವಿತರಿಸಿ ಗೌರವಿಸಿದರು.
‘ಬಿಜೆಪಿ ಕಾರ್ಯಕರ್ತರು ತಮ್ಮ ಮನೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಬೇಕು, ಕೊರೊನಾ ವೈರಸ್ ತೊಲಗಿಸಲು ಶ್ರಮಿಸುತ್ತಿರುವ ಪೌರಕಾರ್ಮಿಕರು, ವೈದ್ಯರನ್ನು ಅವರಿಗೆ ಸನ್ಮಾನಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕರೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ವಾರ್ಡ್ನ 16 ಮಂದಿ ಪೌರಕಾರ್ಮಿಕರಿಗೆ ಬಟ್ಟೆಗಳನ್ನು ನೀಡಿ ಸನ್ಮಾನಿಸಲಾಯಿತು’ಎಂದು ಯುವ ಮುಖಂಡ ಶಿವನಗೌಡ ಪಾಟೀಲ್ ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯೆ ಜಯಮ್ಮ, ನರೇಂದ್ರಕುಮಾರ್, ಬೇತೂರು ಬಸವರಾಜು, ಮಂಡಲದ ಅಧ್ಯಕ್ಷ ಆನಂದರಾವ್ ಶಿಂಧೆ, ವಾರ್ಡ್ ಅಧ್ಯಕ್ಷ ತಿಪ್ಪೇಸ್ವಾಮಿ, ರೇಣುಕಮ್ಮ ಬಣಕಾರ್, ತರಕಾರಿ ಶಿವಕುಮಾರ್, ಬಸವರಾಜ್ ಇದ್ದರು.