ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶೇ 75.59 ಮತ ಚಲಾವಣೆ

ಕಳೆದ ಬಾರಿಗಿಂತ ಶೇ 1 ಕಡಿಮೆ; ಹೊನ್ನಾಳಿಯಲ್ಲಿ ಗರಿಷ್ಠ, ದಾವಣಗೆರೆ ಉತ್ತರದಲ್ಲಿ ಕನಿಷ್ಠ
Last Updated 13 ಮೇ 2018, 6:11 IST
ಅಕ್ಷರ ಗಾತ್ರ

ದಾವಣಗೆರೆ: ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ, ಹಣ ಹಂಚಲಾಗಿದೆ ಎಂದು ಪರಸ್ಪರ ಆರೋಪಿಸಿಕೊಂಡ ಕಾಂಗ್ರೆಸ್‌–ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ಗಲಾಟೆ, ನಕಲಿ ಮತದಾನ ಯತ್ನ, ಅಲ್ಲಲ್ಲಿ ಕೈಕೊಟ್ಟ ಮತಯಂತ್ರಗಳು, ಇವುಗಳನ್ನು ಹೊರತುಪಡಿಸಿದರೆ ‘ಪ್ರಜಾತಂತ್ರ’ದ ಹಬ್ಬವಾದ ಮತದಾನ ಜಿಲ್ಲೆಯಲ್ಲಿ ಶನಿವಾರ ಬಹುತೇಕ ಸುಗಮ ಹಾಗೂ ಶಾಂತವಾಗಿ ನಡೆಯಿತು.

ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕಾಂಗ್ರೆಸ್‌ ಪಾಲಿಕೆ ಸದಸ್ಯ  ಜೆ.ಎನ್‌. ಶ್ರೀನಿವಾಸ್ ಅವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ನಗರದ ತರಳಬಾಳು ಬಡಾವಣೆಯ ಮಾಗನೂರು ಬಸಪ್ಪ ಶಾಲೆಗೆ ಶನಿವಾರ ಮತ ಚಲಾಯಿಸಲು ಬಂದಿದ್ದ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಚುನಾವಣಾ ಸಿಬ್ಬಂದಿ ಗುರುತಿನ ಚೀಟಿ ತೋರಿಸುವಂತೆ ಕೇಳಿದ ಪ್ರಸಂಗವೂ ನಡೆದಿದೆ.

ಹರಿಹರ ತಾಲ್ಲೂಕು ಮಲೇಬೆನ್ನೂರು ಪಟ್ಟಣದ ಮತಗಟ್ಟೆಯಲ್ಲಿ ರಾಜಪ್ಪ ಎಂಬುವವರು ಎರಡನೇ ಬಾರಿ ಮತದಾನಕ್ಕೆ ಹೋದಾಗ ಮತಗಟ್ಟೆ ಅಧಿಕಾರಿಗಳ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಗ್ರಾಮೀಣ ಭಾಗದಲ್ಲಿ ಉತ್ಸಾಹ: ಮಾಯಕೊಂಡದ ಆಲೂರಹಟ್ಟಿ, ಹರಪನಹಳ್ಳಿಯ ದುಗ್ಗಾವತಿ, ತೆಲಿಗಿ ಹಾಗೂ ವಾಲ್ಮೀಕಿನಗರ, ಹರಿಹರದ ವಿನೋಬನಗರ, ಬನ್ನಿಕೋಡು ಮತಗಟ್ಟೆಗಳಲ್ಲಿ ಮತದಾರರು ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ಉತ್ಸಾಹದಿಂದ ಮತ ಚಲಾಯಿಸಿದರು. ಈ ಮೂರೂ ಸ್ಥಳಗಳಲ್ಲಿ ಮಧ್ಯಾಹ್ನ 12 ಸುಮಾರಿಗೆ ಸರಾಸರಿ ಶೇ 30ರಷ್ಟು ಮತದಾನವಾಗಿತ್ತು. ಹೊನ್ನಾಳಿ, ಚನ್ನಗಿರಿ ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಮಧ್ಯಾಹ್ನ ನಂತರ ಬಿರುಸಿನ ಮತದಾನ ನಡೆಯಿತು.

ಚುನಾವಣಾ ಸಿಬ್ಬಂದಿಗೆ ರೊಟ್ಟಿ ಊಟ

ಎರಡು ಜೋಳದ ರೊಟ್ಟಿ, ಹೆಸರುಕಾಳು ಪಲ್ಯ, ಅನ್ನ, ಸೌತೆಕಾಯಿ ಸಾರು, ಮೊಸರು, ಮಜ್ಜಿಗೆ.. ಚುನಾವಣಾ ಸಿಬ್ಬಂದಿಗೆ ಹರಪನಹಳ್ಳಿಯ ದುಗ್ಗಾವತಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಾಡಿದ ಊಟದ ವ್ಯವಸ್ಥೆ ಇದು. ‘ಪ್ರಥಮ ಬಾರಿಗೆ ಈ ವ್ಯವಸ್ಥೆ ಮಾಡಲಾಗಿದೆ. ನಾಲ್ಕು ಮತಗಟ್ಟೆಗಳಿಂದ ಒಟ್ಟು 50 ಸಿಬ್ಬಂದಿಗೆ ಬೆಳಿಗ್ಗೆ ಅವಲಕ್ಕಿ, ಉಪ್ಪಿಟ್ಟು, ಮಧ್ಯಾಹ್ನ ಊಟ, ಸಂಜೆ 4 ಗಂಟೆ ಸುಮಾರಿಗೆ ಬಿಸ್ಕೆಟ್, ಮಂಡಕ್ಕಿ, ಟೀ ನೀಡಲಾಗುವುದು’ ಎಂದು ಶಾಲೆಯ ಮುಖ್ಯ ಶಿಕ್ಷಕ ಕೊಟ್ರಬಸಪ್ಪ ತಿಳಿಸಿದರು.

ತಿರುಗದ ಫ್ಯಾನ್‌

ಜಿಲ್ಲೆಯ ಬಹುತೇಕ ಮತಗಟ್ಟೆ ಕೇಂದ್ರಗಳಲ್ಲಿ ಫ್ಯಾನ್‌ಗಳು ತಿರುಗಲಿಲ್ಲ. ಮತದಾರರು ಯಂತ್ರದಲ್ಲಿ ಮತದ ಬಟನ್ ಒತ್ತಿದ ಶಬ್ದ ಕೇಳಿಸುತ್ತಿಲ್ಲ ಎಂಬ ಕಾರಣಕ್ಕೆ ಫ್ಯಾನ್ ಆನ್ ಮಾಡಲಿಲ್ಲ. ಸೆಖೆ ಇದ್ದರೂ ಫ್ಯಾನ್ ಆನ್ ಮಾಡದೆ ಒದ್ದಾಡುವ ಪರಿಸ್ಥಿತಿ ನಮ್ಮದಾಗಿದೆ ಎಂದು ಜಗಳೂರು ಅರಸೀಕೆರೆ ಮತಗಟ್ಟೆ 109 ಸಂಖ್ಯೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಇಲ್ಲೇ ಚುನಾವಣೆ ಕರ್ತವ್ಯ ಮಾಡಿದ್ದೆ’

‘ನಾನು ಅಂಗನವಾಡಿ ಕಾರ್ಯಕರ್ತೆಯಾಗಿದ್ದೆ; 24 ವರ್ಷ ಚುನಾವಣೆ ಕರ್ತವ್ಯ ಮಾಡಿದ್ದೆ. ಈಗ ಬಹಳಷ್ಟು ಸುಧಾರಣೆ ಕಂಡಿದೆ. ಈಗ ಊಟ, ವಸತಿ ವ್ಯವಸ್ಥೆ ಮಾಡುತ್ತಿದ್ದಾರೆ. ಮೊದಲೆಲ್ಲ ತುಂಬಾ ಕಷ್ಟ ಇರುತ್ತಿತ್ತು. ಇದೇ ಮತಗಟ್ಟೆಯಲ್ಲಿ ಕೆಲಸ ಮಾಡಿದ್ದು ಈಗ ನೆನಪಾಗುತ್ತಿದೆ’ ಎಂದು ಹರಪನಹಳ್ಳಿಯ ತೆಲಿಗಿಯ ಮತಗಟ್ಟೆಗೆ ಮತ ಹಾಕಲು ಬಂದಿದ್ದ 85 ವರ್ಷದ ಹೊನ್ನಮ್ಮ ಹೇಳಿದರು. ‘ಪ್ರತಿಯೊಬ್ಬರೂ ವೋಟು ಹಾಕಬೇಕು. ಎಲ್ಲರೂ ಮತ ಹಾಕಬೇಕು ಎಂದು ಹೇಳುತ್ತಿದ್ದೆ; ಈಗ ನನ್ನ ಮಾತು ಯಾರು ಕೇಳ್ತಾರೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT