ದಾವಣಗೆರೆ: ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ವೈದ್ಯಕೀಯ ತಪಾಸಣೆ ಮತ್ತು ಪ್ರಮಾಣಪತ್ರಗಳ ದೃಢೀಕರಣ ಮಾಡಿಸಿಕೊಳ್ಳಲು ಬಂದಿದ್ದ ಅಂಗವಿಕಲ ಅಭ್ಯರ್ಥಿಗಳು, ಅಧಿಕಾರಿಗಳ ಸಂವಹನ ಕೊರತೆಯಿಂದಾಗಿ ನಾಲ್ಕೈದು ಗಂಟೆಗಳ ಕಾಲ ಪರದಾಡಬೇಕಾಯಿತು.
ಸಿಇಟಿ, ನೀಟ್ ಇನ್ನಿತರ ಪ್ರವೇಶ ಪರೀಕ್ಷೆಗಳನ್ನು ಬರೆದು, ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸುಗಳ ಸೀಟ್ ನಿರೀಕ್ಷೆಯಲ್ಲಿರುವ 15ಕ್ಕೂ ಹೆಚ್ಚು ಅಭ್ಯರ್ಥಿಗಳು ಬುಧವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿಗೆ ಬಂದಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಹಾಗೂ ಪಕ್ಕದ ರಾಣೇಬೆನ್ನೂರಿನ ವಿದ್ಯಾರ್ಥಿಗಳೂ ಇದ್ದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅವರಿಗೆ ಆನ್ಲೈನ್ ಮೂಲಕ ಮಾಹಿತಿ ರವಾನಿಸಲಾಗಿತ್ತು. ಆದರೆ ಈ ಕುರಿತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲ. ಇದರಿಂದ ಅಂಗವಿಕಲ ವಿದ್ಯಾರ್ಥಿಗಳು ಕಾಯಬೇಕಾಯಿತು.
ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ ಅವರು ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನಂತರ ಮಧ್ಯಾಹ್ನ 3 ಗಂಟೆಗೆ ವೈದ್ಯಕೀಯ ತಪಾಸಣೆ ಆರಂಭವಾಯಿತು. ಬೆಳಿಗ್ಗೆ10ಕ್ಕೆ ಬಂದಿದ್ದ ಅಂಗವಿಕಲ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಮಧ್ಯಾಹ್ನದವರೆಗೂ ಕಾಯಬೇಕಾಯಿತು.
‘ನಮಗೆ ತಿಳಿಸಿದ ಪ್ರಕಾರ ಜಿಲ್ಲಾ ಪಂಚಾಯಿತಿಕಚೇರಿಗೆ ಬಂದೆವು. ಆದರೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲ’ ಎಂದು ಪಾಲಕ ಮಂಜುನಾಥ್ ತಿಳಿಸಿದರು.