ಹರಪನಹಳ್ಳಿ: ತಾಲ್ಲೂಕಿನ ಸುಕ್ಷೇತ್ರ ಚಿಗಟೇರಿ ಶಿವನಾರದಮುನಿ ರಥೋತ್ಸವ ವೇಳೆ ಕಿಡಿಗೇಡಿಗಳು ಬಾಳೆಹಣ್ಣಿಗೆ ಮೊಳೆ ಚುಚ್ಚಿ ರಥಕ್ಕೆ ಎಸೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಏ.24ರಂದು ರಥೋತ್ಸವ ವಿಜೃಂಭಣೆಯಿಂದ ನೆರವೇರಿತ್ತು. ರಥಕ್ಕೆ ನಾರು ಅರ್ಪಿಸುವುದು ಇಲ್ಲಿ ನಡೆದು ಬಂದ ಸಂಪ್ರದಾಯ. ಬಾಳೆಹಣ್ಣು ಸೇರಿ ಉತ್ತತ್ತಿ ಎಸೆಯುವುದು ಇಲ್ಲಿ ತೀರಾ ಕಡಿಮೆ. ಈ ಸಂಪ್ರದಾಯ ಕಡಿಮೆ ಆಗುತ್ತಾ ಬರುತ್ತಿರುವ ಸಂದರ್ಭದಲ್ಲಿ ಬಾಳೆಹಣ್ಣಿಗೆ ಮೊಳೆ ಚುಚ್ಚಿ ಎಸೆದಿರುವುದು ಭಕ್ತರಲ್ಲಿ ಬೇಸರ ಉಂಟು ಮಾಡಿದೆ.
ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೊಳೆ ಚುಚ್ಚಿದ ಬಾಳೆಹಣ್ಣಿನ ಚಿತ್ರವನ್ನು ಸೆರೆ ಹಿಡಿದಿರುವ ಭಕ್ತರು ವಾಟ್ಸ್ಆ್ಯಪ್, ಫೇಸ್ಬುಕ್ಗೆ ಹಾಕಿ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿದ್ದಾರೆ.
ಕಿಡಿಗೇಡಿಗಳು ಯಾವ ಕಾರಣಕ್ಕೆ ಇಂತಹ ಕೃತ್ಯ ಎಸೆಗಿದ್ದಾರೆ ಎಂಬುದು ತಿಳಿದು ಬಂದಿಲ್ಲ. ದೇವರ ಮೇಲೆಯೇ ಈ ರೀತಿಯ ಕೃತ್ಯಕ್ಕೆ ಮುಂದಾಗಿರುವುದು ನಾಚಿಕೆಗೇಡು ಎಂದು ಚಿಗಟೇರಿ ಗ್ರಾಮದ ಉಮೇಶ ಹೇಳಿದರು.
ಇದೇ ಏ.24ರಂದು ಜರುಗಿದ್ದ ನಾರದಮುನಿ ರಥೋತ್ಸವಕ್ಕೆ ಸಾವಿರಾರು ಭಕ್ತರು ಸೇರಿದ್ದರು.