ದಾವಣಗೆರೆ: ಜಗತ್ತಿನಲ್ಲಿ ಧನವಂತರಾಗುವುದಕ್ಕಿಂತ ಹೃದಯವಂತರಾಗುವುದು ಮುಖ್ಯ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ಶರಣ ಸಂಗಮದ ಅಂಗವಾಗಿ ಇಲ್ಲಿನ ಬಸವಕೇಂದ್ರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ‘ಅಂತಃಕರಣ ಮತ್ತು ಅರಳುವಿಕೆ’ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಗತ್ತಿನಲ್ಲಿ ಇಂದು ಕೋಟಿ, ಕೋಟಿ ವ್ಯಕ್ತಿಗಳು ಸಿಗುತ್ತಾರೆ. ಆದರೆ ಹೃದಯವಂತರು ಸಿಗುವುದು ವಿರಳಾತಿವಿರಳ. ನೂರಾರು ಕೋಟಿ ಹಣ ಗಳಿಸಿ ಧನವಂತರಾಗುತ್ತೇವೆ. ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಿದಾಗ ಮಾತ್ರ ನಮ್ಮ ಶ್ರೀಮಂತಿಕೆಗೆ ಬೆಲೆ ಬರುತ್ತದೆ’ ಎಂದು ಹೇಳಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ‘ರಾಜ್ಯದಲ್ಲಿ ಮಠ, ಮಂದಿರಗಳು ಇಲ್ಲದಿದ್ದರೆ ಸಂಸ್ಕೃತಿ, ಸಂಸ್ಕಾರಗಳು ಬೇರೆಯಾಗುತ್ತಿದ್ದವು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಮಠ–ಮಂದಿರಗಳು ನಮ್ಮ ರಾಜ್ಯದಲ್ಲಿ ತಮ್ಮದೇ ಆದ ಕೊಡುಗೆ ನೀಡಿವೆ. ಕಸಾಪ ಹಾಗೂ ಮಠಗಳ ನಡುವೆ ಅವಿನಾಭಾವ ಸಂಬಂಧವಿದೆ. ಕನ್ನಡ ಕಟ್ಟುವ ವಿಷಯದಲ್ಲಿ ಕನ್ನಡಿಗರು ಎಂದಿಗೂ ಅಭಿಮಾನ ಶೂನ್ಯರಾಗುವುದಿಲ್ಲ. ಭಾಷೆಗೆ, ನೆಲ, ಜಲಕ್ಕೆ ಕೆಡುಕಾದಾಗ ಸಿಡಿದೇಳುತ್ತಾರೆ’ ಎಂದರು.
ಮೆಳ್ಳೆಕಟ್ಟೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಷಣ್ಮುಖಪ್ಪ ಸಾಲಿ ಉಪನ್ಯಾಸ ನೀಡಿದರು. ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಜಮಖಂಡಿ ಬಸವಕೇಂದ್ರದ ಶಂಕರಣ್ಣ ಕಲ್ಯಾಣಿ ಇದ್ದರು. ಬಸವಕಲಾ ಲೋಕದ ರುಕ್ಮಾಬಾಯಿ ವಚನ ಸಂಗೀತ ನಡೆಸಿಕೊಟ್ಟರು. ಎನ್.ಜೆ. ಶಿವಕುಮಾರ್ ಸ್ವಾಗತಿಸಿ, ನಿರೂಪಿಸಿದರು.