ಶಿವಮೊಗ್ಗ: ಭದ್ರಾ ಜಲಾಶಯದಿಂದ ನೀರು ಸ್ಥಗಿತಗೊಳಿಸುವ ನಿರ್ಧಾರವನ್ನು ಕಾಡಾ ಮುಂದೂಡಿದೆ. ಡಿ.5ರವರೆಗೆ ನೀರು ಹರಿಸಲು ನಿರ್ಧರಿಸಿದೆ.
ಭದ್ರಾ ಎಡದಂಡೆ ಮತ್ತು ಬಲದಂಡೆ ನಾಲೆಗಳ ಮೂಲಕ ಹರಿಸುತ್ತಿರುವ ನೀರನ್ನು ನ.28ರ ರಾತ್ರಿಯಿಂದ ನಿಲ್ಲಿಸಲು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ನ.24ರಂದು ನಿರ್ಧರಿಸಿತ್ತು. ಇದರಿಂದ ಕೊನೇ ಭಾಗದ ರೈತರಿಗೆ ತೊಂದರೆಯಾಗುತ್ತಿತ್ತು. ಕಾಡಾ ನಿರ್ಧಾರದಿಂದ ರೈತರಿಗೆ ಉಂಟಾಗುವ ಸಂಕಷ್ಟದ ಬಗ್ಗೆ ‘ಪ್ರಜಾವಾಣಿ’ ನ.25ರಂದು ಬೆಳಕು ಚೆಲ್ಲಿತ್ತು.
ತಡವಾಗಿ ಭತ್ತ ನಾಟಿ ಮಾಡಿದ್ದರಿಂದ ಈಗ ಕಾಳುಕಟ್ಟುತ್ತಿದೆ. ಇಂಥ ಸಂದರ್ಭದಲ್ಲಿ ನೀರು ನಿಲ್ಲಿಸಿದರೆ ಬೆಳೆ ಬಾರದೆ ನಷ್ಟವಾಗುತ್ತದೆ ಎಂದು ರೈತರು ಸಂಕಷ್ಟ ತೋಡಿಕೊಂಡಿದ್ದರು. ಪ್ರತಿಭಟನೆಯನ್ನೂ ನಡೆಸಿದ್ದರು.
ದಾವಣಗೆರೆ ಮತ್ತು ಮಲೆಬೆನ್ನೂರು ವಿಭಾಗ ಕೊನೆಯ ಭಾಗದ ಅಚ್ಚುಕಟ್ಟು ಪ್ರದೇಶದ ರೈತರ ಕೋರಿಕೆ ಮೇರೆಗೆ ಕಾಡಾ ಅಧಿಕ್ಷಕ ಎಂಜಿನಿಯರ್ ಬುಧವಾರ ಖುದ್ದಾಗಿ ಪರಿವೀಕ್ಷಣೆ ನಡೆಸಿದ್ದರು. ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೇ ಭಾಗಗಳಲ್ಲಿ ಭತ್ತದ ಬೆಳೆಗಳು ತೆನೆ ಬರುವ ಹಂತದಲ್ಲಿರವುದುನ್ನು ವೀಕ್ಷಿಸಿದ್ದರು. ನೀರು ಅವಶ್ಯಕತೆ ಇರುವುದನ್ನು ಮನಗಂಡು ಒಂದು ವಾರ ನೀರು ಹರಿಸುವುದನ್ನು ಹೆಚ್ಚುವರಿಯಾಗಿ ಒಂದು ವಾರ ಮುಂದುವರಿಸಲು ನಿರ್ಧರಿಸಿದರು.
ಭದ್ರಾ ಅಚ್ಚುಕಟ್ಟು ಪ್ರದೇಶದ ಮುಂಗಾರು ಹಂಗಾಮಿನ ಬೆಳೆಗಳಿಗೆಎಡದಂಡೆ ಮತ್ತು ಬಲದಂಡೆ ನಾಲೆ, ಆನವೇರಿ ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ, ಮಲೇಬೆನ್ನೂರು ಶಾಖಾ ನಾಲೆ ಮತ್ತು ಹರಿಹರ ಶಾಖಾ ನಾಲೆಗಳಲ್ಲಿ ಡಿ.5ರವರೆಗೆ ನೀರು ಹರಿಯಲಿದೆ.