ದಾವಣಗೆರೆ: ಭದ್ರಾ ಜಲಾಶಯದಿಂದ ದಾವಣಗೆರೆಗೆ ನೀರು ಪೂರೈಸುವ ಭದ್ರಾ ಬಲದಂಡೆ ತೂಗು ತೊಟ್ಟಿಲು ನಲ್ಕುಂದ ಗ್ರಾಮದಲ್ಲಿ ಮುರಿದು ನಲ್ಕುಂದ–ಶ್ಯಾಗಲೇ ಹಳ್ಳಕ್ಕೆ ಬಿದ್ದಿದೆ. ಚಾನಲ್ನ ನೀರು ಹಳ್ಳಕ್ಕೆ ಹರಿಯುತ್ತಿದೆ.
ಬಾಡಾದಿಂದ ಸುಮಾರು 7 ಕಿಲೋಮೀಟರ್ ದೂರದ ನಲ್ಕುಂದದ ಮೂಲಕ ಹಾದು ಹೋಗುವ ಈ ತೊಟ್ಟಿಲು ಸೇತುವೆಯು ಕಳೆದ ಕೆಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ದುರ್ಬಲಗೊಂಡಿತ್ತು. ಭಾನುವಾರ ಕುಸಿದು ಬಿದ್ದಿದೆ. ಯಾವುದೇ ಪ್ರಾಣಹಾನಿ, ಬೆಳೆ ಹಾನಿ ಉಂಟಾಗಿಲ್ಲ.
ಈ ತೂಗು ತೊಟ್ಟಿಲನ್ನು ಕೂಡಲೇ ಸರಿಪಡಿಸದೇ ಇದ್ದರೆ ದಾವಣಗೆರೆ ನಗರಕ್ಕೆ ನೀರು ಪೂರೈಸಲು, ಆವರಗೊಳ್ಳ, ಕಕ್ಕರಗೊಳ್ಳ, ರಾಂಪುರ, ನಲ್ಕುಂದ, ಉಪನಾಯಕನಹಳ್ಳಿ ಸಹಿತ ಅನೇಕ ಹಳ್ಳಿಗಳ ರೈತರಿಗೆ ಭತ್ತ ಬೆಳೆಯುವ ಸಮಯಕ್ಕೆ ನೀರಿಲ್ಲದಂತಾಗಲಿದೆ ಎಂದು ಸ್ಥಳೀಯರಾದ ಪವನ್ ಆತಂಕ ವ್ಯಕ್ತಪಡಿಸಿದ್ದಾರೆ.
ಸುತ್ತಲಿನ ತೋಟ ಮತ್ತು ಜಮೀನಿನ ಮಣ್ಣು ಕೊರೆದು ಹಳ್ಳ ಪಾಲಾಗುತ್ತಿದೆ. ಅದಕ್ಕೂ ತಡೆಗೋಡೆ ನಿರ್ಮಿಸಿದರೆ ಸ್ಥಳೀಯ ರೈತರ ಜಮೀನು ಉಳಿಯಲಿದೆ ಎಂದು ತಿಳಿಸಿದ್ದಾರೆ.
ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರು ಈ ಸ್ಥಳಕ್ಕೆ ಸೋಮವಾರ ಭೇಟಿ ನೀಡಲಿದ್ದಾರೆ.