ದಾವಣಗೆರೆ: ರಾಹುಲ್ ಗಾಂಧಿ ನೇತೃತ್ವದ ‘ಭಾರತ ಐಕ್ಯತಾ ಯಾತ್ರೆ’ (ಭಾರತ್ ಜೋಡೊ) ಅ.12ರಂದು ಚಿತ್ರದುರ್ಗದ ಜವಗೊಂಡನಹಳ್ಳಿ ಮೂಲಕ ಆರಂಭವಾಗಲಿದೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ತಿಳಿಸಿದರು.
‘ದಾವಣಗೆರೆಗೆ ಯಾತ್ರೆ ಆಗಮಿಸುವುದಿಲ್ಲ. ಬದಲಾಗಿ ಚಿತ್ರದುರ್ಗ ಜಿಲ್ಲೆಗೆ ಬಂದು ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು ಮೂಲಕ ಬಳ್ಳಾರಿ ಜಿಲ್ಲೆಗೆ ತಲುಪಲಿದೆ. ಸೆ.30ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ರಾಜ್ಯದಲ್ಲಿ ಪಾದಯಾತ್ರೆ ಆರಂಭವಾಗಲಿದ್ದು, ರಾಜ್ಯದ 8 ಜಿಲ್ಲೆಗಳಲ್ಲಿ 21 ದಿನಗಳ ಕಾಲ 510 ಕಿ.ಮೀ ಪಾದಯಾತ್ರೆ ನಡೆಯಲಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಈ ಎರಡು ಜಿಲ್ಲೆಗಳ ಪಾದಯಾತ್ರೆಯ ಉಸ್ತುವಾರಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ವಹಿಸಲಿದ್ದು, ಪಾದಯಾತ್ರೆಯ ಯಶಸ್ಸಿಗೆ ಮಾಜಿ ಡಾ. ಶಾಮನೂರು ಶಿವಶಂಕರಪ್ಪ, ಎಸ್.ಎಸ್, ಮಲ್ಲಿಕಾರ್ಜುನ್, ಮಾಜಿ ಸಚಿವ ಎಚ್.ಆಂಜನೇಯ, ಶಾಸಕರಾದ ಎಸ್.ರಾಮಪ್ಪ, ಅಬ್ದುಲ್ ಜಬ್ಬಾರ್, ರಘುಮೂರ್ತಿ ಸೇರಿದಂತೆ 38 ಜನರ ಸಮಿತಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಚಿಸಿದ್ದಾರೆ’ ಎಂದರು.
‘ರಾಹುಲ್ಗಾಂಧಿಯವರು ಸ್ವಾರ್ಥಕ್ಕಾಗಿ ಅಥವಾ ಅಧಿಕಾರಕ್ಕಾಗಿ ಪಾದಯಾತ್ರೆ ಮಾಡುತ್ತಿಲ್ಲ. ದೇಶದ ಜನಸಾಮಾನ್ಯರ ಪರವಾಗಿ, ಬಹುತ್ವವನ್ನು ರಕ್ಷಿಸಲು, ಬೆಲೆ ಏರಿಕೆ, ತೈಲ ಬೆಲೆ ಏರಿಕೆ ವಿರುದ್ಧ ರಾಹುಲ್ ಗಾಂಧಿ ಪಾದಯಾತ್ರೆ ನಡೆಸುತ್ತಿದ್ದಾರೆ.
ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶವನ್ನು ಹಾಳು ಮಾಡುತ್ತಿದೆ. ಯುವಕರಿಗೆ ಉದ್ಯೋಗ ಇಲ್ಲದಂತೆ ಮಾಡಿದೆ. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲುಈಪಾದಯಾತ್ರೆಹಮ್ಮಿಕೊಳ್ಳಲಾಗಿದೆ’ಎಂದರು.
‘ಧರ್ಮ, ರಾಜಕಾರಣದ ಹೆಸರಿನಲ್ಲಿ ಬಿಜೆಪಿ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದು, ಜನರಿಗೆ ಭಯ ಹುಟ್ಟಿಸುವ ಕೆಲಸವನ್ನು ಮಾಡುತ್ತಿದೆ. ಜನರ ಒಡೆದ ಮನಸ್ಸುಗಳನ್ನು ಈ ಜೋಡೊ ಯಾತ್ರೆಯ ಮೂಲಕ ಮಾಡಲಾಗುತ್ತಿದೆ. ಕನಿಷ್ಠ ಐದು ಸಾವಿರಕ್ಕಿಂತ ಹೆಚ್ಚಿನ ಜನರನ್ನು ಕರೆತಂದು ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ಇಂಟಕ್ ಅಧ್ಯಕ್ಷ ಕೆ.ಎಂ. ಮಂಜುನಾಥ್, ಕಾರ್ಮಿಕ ವಿಭಾಗದ ಅಧ್ಯಕ್ಷ ಎಚ್. ಸುಭಾನ್ ಸಾಬ್, ಸೇವಾದಳದ ಅಧ್ಯಕ್ಷ ಡೋಲಿ ಚಂದ್ರು, ಅಸಂಘಟಿತ ಕಾರ್ಮಿಕರ ಅಧ್ಯಕ್ಷ ಎಸ್. ನಂಜ್ಯಾನಾಯ್ಕ್, ಮುಖಂಡರಾದ ಎನ್.ಎಸ್. ವೀರಭದ್ರಪ್ಪ, ಎಂ.ಕೆ. ಲಿಯಾಖತ್ ಅಲಿ, ಡಿ. ಶಿವಕುಮಾರ್, ಬಿ.ಎಚ್. ಉದಯಕುಮಾರ್, ಮುಬಾರಕ್, ಎಚ್. ಅಣ್ಣಪ್ಪ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.