ದಾವಣಗೆರೆ: ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ಹಕ್ಕಿಜ್ವರ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ಕಲ್ಲಿಂಗ್ ಕಾರ್ಯಾಚರಣೆ ನಡೆಯಿತು.
ಗ್ರಾಮಸ್ಥರ ಮನವೊಲಿಸಿಗ್ರಾಮದ ಮನೆಗಳಲ್ಲಿದ್ದ ಕೋಳಿಗಳನ್ನು ಶೋಧಿಸಲಾಯಿತು. ಕೆಲ ಗ್ರಾಮಸ್ಥರು ಕೋಳಿಗಳನ್ನು ನೀಡಲು ಹಿಂದೇಟು ಹಾಕಿದರು. ಒತ್ತಾಯಪೂರ್ವಕವಾಗಿ ಕೋಳಿಗಳನ್ನು ಹಿಡಿದು ತರಲಾಯಿತು. 60ಕ್ಕೂ ಹೆಚ್ಚು ಕೋಳಿಗಳ ಕಲ್ಲಿಂಗ್ ನಡೆಸಲಾಯಿತು.
‘ಕೆಲ ಗ್ರಾಮಸ್ಥರ ಮನವೊಲಿಸಿ ಅಧಿಕಾರಿಗಳ ನೇತೃತ್ವದಲ್ಲಿ ವೈಜ್ಞಾನಿಕವಾಗಿ ಕಲ್ಲಿಂಗ್ ಮಾಡಲಾಯಿತು. ಶನಿವಾರವೂ ಕಲ್ಲಿಂಗ್ ಕಾರ್ಯಾಚರಣೆ ನಡೆಯಲಿದೆ. ಹಕ್ಕಿಜ್ವರ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು’ ಎಂದು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ತಿಳಿಸಿದರು.
ಕಾರ್ಯಾಚರಣೆಯಲ್ಲಿಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಭಾಸ್ಕರ್ ನಾಯ್ಕ, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಹಾಗೂ ಸಿಬ್ಬಂದಿ ಇದ್ದರು.