ದಾವಣಗೆರೆ: ಆಟವಾಡುತ್ತಿದ್ದ ಬಾಲಕನಿಗೆ ಹಂದಿಯೊಂದು ಕಚ್ಚಿದ್ದು, ತೀವ್ರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶಿವಕುಮಾರಸ್ವಾಮಿ ಬಡಾವಣೆಯ ಅಶೋಕ್ ಅವರ ಪುತ್ರ ವೇದಾಂತ್ ಎ. ಗೌಡ (10) ಗಾಯಗೊಂಡ ಬಾಲಕ. ಗುರುವಾರ ಸಂಜೆ ಆಟವಾಡುತ್ತಿದ್ದ ವೇಳೆ ಚೆಂಡು ಹಂದಿ ಮರಿಗಳು ಇರುವ ಜಾಗಕ್ಕೆ ಹೋಗಿದೆ. ಅದನ್ನು ತೆಗೆದುಕೊಂಡು ಬರಲು ಹೋದಾಗ ಬಾಲಕನ ಬಲ ಭುಜವನ್ನು ಕಚ್ಚಿಕೊಂಡು 10 ಅಡಿ ದೂರ ಎಳೆದುಕೊಂಡು ಹೋಗಿದೆ.
ಹಂದಿ ಎಳೆದುಕೊಂಡ ಹೋದ ರಭಸಕ್ಕೆ ಬಾಲಕನ ಮುಖ ಮೈಯೆಲ್ಲಾ ತರಚಿದ್ದು, ಬಲಗೈನ ಭುಜದ ಮೂಳೆ ಮುರಿದು ಹೋಗಿದೆ. ಈ ವೇಳೆ ಅಲ್ಲಿದ್ದವರು ಬಾಪೂಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ಬಾಲಕನಿಗೆ ರೇಬಿಸ್ ಲಸಿಕೆ ನೀಡಿದ್ದು, ನಾಳೆ ಶಸ್ತ್ರ ಚಿಕಿತ್ಸೆ ನಡೆಸುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ವೇದಾಂತ್ ತಂದೆ ಮಯೂರ್ ಎಲೆಕ್ಟ್ರಾನಿಕ್ಸ್ ಮಾಲೀಕ ಅಶೋಕ್ ತಿಳಿಸಿದರು.
ಕೆಟಿಜೆ ಠಾಣೆಗೆ ಈ ಕುರಿತು ದೂರು ನೀಡಿದ್ದು, ಹಂದಿಗಳನ್ನು ಸಾಗಿಸುವಂತೆ ಮಾಲೀಕನಿಗೆ ಪೊಲೀಸರು ಎಚ್ಚರಿಸಿದ್ದಾರೆ.