ದಾವಣಗೆರೆ: ‘ಚುನಾವಣೆ ಸಮಯದಲ್ಲಿ ಸ್ತ್ರೀಶಕ್ತಿ ಸಂಘಗಳು ಸೇರಿದಂತೆ ಎಲ್ಲರೂ ಕೈಯೊಡ್ಡುವ ಪರಿ ಬೆಳೆಸಿಕೊಂಡಿದ್ದು, ಯೋಗ್ಯರನ್ನು ಆಯ್ಕೆ ಮಾಡುವ ಮನಸ್ಥಿತಿ ಯಾವೊಂದು ಸಂಘಟನೆಗಳಿಗೂ ಇದ್ದಂತಿಲ್ಲ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.
ಮಂಗಳೂರಿನ ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್ ವತಿಯಿಂದ ದಾವಣಗೆರೆಯ ಸ್ವ–ಸಹಾಯ ಗುಂಪುಗಳ ಪ್ರೇರಕರಿಗೆ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಮ್ಮದೊಂದು ಸಂಘವಿದೆ ಏನು ಕೊಡುತ್ತೀರಿ ಎನ್ನುವಷ್ಟರಮಟ್ಟಿಗೆ ಸಂಘಗಳು ಮುಂದುವರಿದಿವೆ. ಯಾವುದೇ ಅಪೇಕ್ಷೆ ಇಲ್ಲದೇ ವೋಟು ಹಾಕುವುದೇ ಮತದಾನ. ಗಂಡು ಮಕ್ಕಳು ಹಾದಿ ತಪ್ಪಬಹುದು. ಆದರೆ ಮಹಿಳೆಯರು ಈ ವಿಷಯದಲ್ಲಿ ಹೆಚ್ಚು ಯೋಚನೆ ಮಾಡಬೇಕು. ಮಹಿಳಾ ಸಂಘಗಳು ಬೇಡುವುದಷ್ಟನ್ನೇ ಆಲೋಚನೆ ಮಾಡದೇ ಕೊಡುವಷ್ಟರ ಮಟ್ಟಿಗೆ ಬೆಳೆಯಬೇಕು’ ಎಂದು ಹೇಳಿದರು.
‘ಸ್ವಸಹಾಯ ಸಂಘಗಳು ಆರ್ಥಿಕವಷ್ಟೇ ಅಲ್ಲದೇ ಶೈಕ್ಷಣಿಕ, ಸಾಮಾಜಿಕ, ನೈತಿಕ, ಧಾರ್ಮಿಕವಾಗಿ ನಮ್ಮ ಬದುಕು ಇನ್ನಷ್ಟು ಎತ್ತರಕ್ಕೆ ಹೋಗಬೇಕು’ ಎಂದರು.
‘ಬಡವರಾಗಿ ಹುಟ್ಟುವುದು ತಪ್ಪಲ್ಲ. ಶ್ರೀಮಂತರಾಗಿ ಸಾಯಬೇಕು. ಮಹಿಳೆಯರು ದೂರದೃಷ್ಟಿಯಿಂದ ಕೆಲಸ ಮಾಡಿದರೆ ಉದ್ದಿಮೆಯಲ್ಲಿ ಯಶಸ್ಸು ಕಾಣಲು ಸಾಧ್ಯ’ ಎಂದು ಉದ್ಯಮಿ ಅಣಬೇರು ರಾಜಣ್ಣ ಹೇಳಿದರು.
ಡಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಡಾ.ಜೆ.ಆರ್. ಷಣ್ಮುಖಪ್ಪ, ಟ್ರಸ್ಟ್ ಅಧಿಕಾರಿ ಹರಿನಾಥ್, ಗುರುರಾಜ್, ನಾರಾಯಣ ಎಂ.ಎಸ್. ವೀಣಾಶಂಕರ್ ಇದ್ದರು.
ಸ್ವಸಹಾಯ ಸಂಘಗಳು ಕೇವಲ ಆರ್ಥಿಕ, ಸಾಮಾಜಿಕ ಸಬಲತೆ ಅಲ್ಲ. ಮಾನಸಿಕ ಸಾಮರ್ಥ್ಯ, ನಾಯಕತ್ವ ಬೆಳೆಸಿಕೊಳ್ಳಲು ಸ್ವಸಹಾಯ ಸಂಘಗಳು ನೆರವಾಗುತ್ತವೆ.
ದುರ್ಗಾಶ್ರೀ, ಉಪವಿಭಾಗಾಧಿಕಾರಿ
ಮಹಿಳೆಯರು ಪಡೆದ ಸಾಲವನ್ನು ಉದ್ಯಮ ಆರಂಭಿಸಲು ಹಾಗೂ ಮಕ್ಕಳ ಶಿಕ್ಷಣಕ್ಕೆ ಸದ್ವಿನಿಯೋಗ ಮಾಡಿಕೊಳ್ಳಬೇಕು. ಗುಂಪು ಮಾಡಿಕೊಂಡು ಉತ್ಪನ್ನಗಳನ್ನು ಮಾರಾಟ ಮಾಡಿದರೆ ಮಾರುಕಟ್ಟೆಯ ಅಗತ್ಯ ಬರುವುದಿಲ್ಲ.
ವಾಸಂತಿ ಉಪ್ಪಾರ್, ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ