ಹರಿಹರ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ಪರಿಹಾರ ನೀಡಲು ನಿರ್ಲಕ್ಷ್ಯ ತೋರಿದ ವಾಯುವ್ಯ ಸಾರಿಗೆಯ ಹುಬ್ಬಳ್ಳಿ ವಿಭಾಗದ ಬಸ್ ಅನ್ನು ನ್ಯಾಯಾಲಯದ ಸಿಬ್ಬಂದಿ ಸೋಮವಾರ ವಶಪಡಿಸಿಕೊಂಡರು.
ತಾಲ್ಲೂಕಿನ ರಾಜನಹಳ್ಳಿ ಕ್ರಾಸ್ ಬಳಿ 2017ರ ಸೆ.13 ರಂದು ನಡೆದ ರಸ್ತೆ ಅಪಘಾತದಲ್ಲಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಬಸವರಾಜ್ (28) ಹಾಗೂ ಮಂಜುನಾಥ್ (26) ಮೃತಪಟ್ಟಿದ್ದರು. ಅವರ ತಂದೆ ಚಂದ್ರಪ್ಪ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನಗರದ ಹಿರಿಯ ಸಿವಿಲ್ ನ್ಯಾಯಾಲಯ 2019ರ ಅ.30ರಂದು ಬಸವರಾಜ್ ಅವರ ಕುಟುಂಬಕ್ಕೆ ₹ 17.84 ಲಕ್ಷ ಹಾಗೂ ಮಂಜುನಾಥ್ ಅವರ ಕುಟುಂಬಕ್ಕೆ ₹ 47.84 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿತ್ತು.
ಹೆಚ್ಚುವರಿ ಪರಿಹಾರಕ್ಕಾಗಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ನ ದ್ವಿಸದಸ್ಯ ಪೀಠದ ನ್ಯಾಯಾಧೀಶರಾದ ಬಿ. ವೀರಪ್ಪ ಹಾಗೂ ರವಿ ಹೊಸಮನಿ ಅವರು 2021ರ ಮಾರ್ಚ್ 21ರಂದು ಬಸವರಾಜ್ ಅವರ ಕುಟುಂಬಕ್ಕೆ ₹ 25.40 ಲಕ್ಷ ಹಾಗೂ ಮಂಜುನಾಥ್ ಅವರ ಕುಟುಂಬಕ್ಕೆ ₹ 47.84 ಲಕ್ಷ ಪರಿಹಾರ ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು.
ಪರಿಹಾರ ವಿತರಿಸಲು ಸಂಸ್ಥೆ ನಿರ್ಲಕ್ಷ್ಯ ತೋರಿದ್ದರಿಂದ ದೂರುದಾರರು ಅಮಲ್ಜಾರಿ ಪ್ರಕರಣ ದಾಖಲಿಸಿದ್ದರು. ಆದಕಾರಣ ವಾಯುವ್ಯ ಸಾರಿಗೆಯ ಹುಬ್ಬಳ್ಳಿ ವಿಭಾಗದ ಕೆಎ 63 ಎಫ್ 0082 ಬಸ್ ಅನ್ನು ಜಪ್ತಿಮಾಡಿ ನ್ಯಾಯಾಲಯದ ಸುಪರ್ದಿಗೆ ಒಪ್ಪಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಾರದಾದೇವಿ ಹತ್ತಿ ಆದೇಶ ನೀಡಿದ್ದರು.
ದೂರುದಾರರ ಪರವಾಗಿ ವಕೀಲ ಕಿತ್ತೂರು ಶೇಖ್ ಇಬ್ರಾಹಿಂ ವಾದ ಮಂಡಿಸಿದ್ದರು. ಅರ್ಜಿದಾರ ಚಂದ್ರಪ್ಪ, ವಕೀಲ ಶ್ರೀನಿವಾಸ್, ನ್ಯಾಯಾಲಯದ ಅಮೀನ್ರಾದ ಬಸಪ್ಪಾಜಿ, ಮನೋಹರ್, ಓಂಕಾರಪ್ಪ, ಶ್ರೀನಿವಾಸ ಉಪಸ್ಥಿತರಿದ್ದರು.