‘ಕೊರೊನಾ ಬಂದಾಗಿನಿಂದ ದುಡಿಮೆ ಇಲ್ಲ. ಆದರೆ ತೆರಿಗೆ ಕಡಿಮೆಯಾಗಿಲ್ಲ. ಇನ್ಶೂರೆನ್ಸ್ ಕಡಿಮೆಯಾಗಿಲ್ಲ. ಅಲ್ಪಸ್ವಲ್ಪ ಬಾಡಿಗೆ ಸಿಕ್ಕರೂ ಡೀಸೆಲ್, ಪೆಟ್ರೋಲ್ ಬೆಲೆ ಒಂದೇ ಸಮನೆ ಏರಿರುವುದರಿಂದ ಬಾಡಿಗೆ ಹೆಚ್ಚು ಹೇಳಬೇಕಾಗುತ್ತದೆ. ಆದರೆ ದುಡಿಮೆ ಸಿಕ್ಕರೆ ಸಾಕು ಎಂದು ಎಲ್ಲರೂ ಕಾಯುತ್ತಿರುವುದರಿಂದ ಕಡಿಮೆ ಬಾಡಿಗೆಯಲ್ಲಿ ಹೋಗಬೇಕಾಗುತ್ತದೆ. ಇಲ್ಲದೇ ಇದ್ದರೆ ಬಾಡಿಗೆ ಬೇರೆಯವರ ಪಾಲಾಗುತ್ತದೆ. ಇಂಥ ಸಂದರ್ಭದಲ್ಲಿ ಸರ್ಕಾರ ಟ್ಯಾಕ್ಸಿ ಚಾಲಕರಿಗೆ ಪರಿಹಾರ ಘೋಷಣೆ ಮಾಡಿದೆ. ಆದರೆ ಅದಕ್ಕೆ ವಿಧಿಸಿರುವ ಷರತ್ತುಗಳು ಪರಿಹಾರ ಪಡೆಯಲು ಅಡ್ಡಿಯಾಗಿದೆ’ ಎಂದು ದಾವಣಗೆರೆಯ ಟ್ಯಾಕ್ಸಿ ಚಾಲಕ ಬದ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.