ದಾವಣಗೆರೆ: ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧ ‘ನಾವು ಭಾರತೀಯರು’ ಎಂಬ ಹೆಸರಿನಲ್ಲಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಶನಿವಾರ ಇಮಾಮ್ ಅಹ್ಮದ್ ರಜಾ ಪಾರ್ಕ್ನಲ್ಲಿ ಆರಂಭಗೊಂಡಿತು.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸಲಾಗುವುದು. ರೈತರಿಗೆ ಸ್ವಾಮಿನಾಥನ್ ವರದಿ ಪ್ರಕಾರ ಬೆಂಬಲ ಬೆಲೆ ನಿಗದಿಗೊಳಿಸುವುದು. ವಿದೇಶದಿಂದ ಕಪ್ಪು ಹಣ ತಂದು ಪ್ರತಿ ಪ್ರಜೆಯ ಖಾತೆಗೆ ₹ 15 ಲಕ್ಷ ಹಾಕಲಾಗುವುದು ಎಂದೆಲ್ಲ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಈಗ ಸಿಎಎ, ಎನ್ಪಿಆರ್, ಎನ್ಆರ್ಸಿ ಎಂಬ ಕರಾಳ ಕಾಯ್ದೆಗಳನ್ನು ತಂದು ಜನರನ್ನು ಭಯಭೀತರನ್ನಾಗಿಸಿದೆ. ಮೂಲ ಘೋಷಣೆಗಳ ಬಗ್ಗೆ ಯಾರೂ ಮಾತನಾಡದಂತೆ ಗಮನವನ್ನು ಬೇರೆಡೆಗೆ ಸೆಳೆಯಲಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಒಂದು ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ರಾಜಕಾರಣ ಮಾಡುವುದು ಸಂವಿಧಾನಕ್ಕೆ ಮಾಡಿದ ಮೋಸ. ಧರ್ಮದ ಆಧಾರದಲ್ಲಿ ಪೌರತ್ವವನ್ನು ನೀಡುವುದು ಸಂವಿಧಾನ ಬಾಹಿರ. ಜಾತ್ಯತೀತ ವ್ಯವಸ್ಥೆಗೆ, ಸೌಹಾರ್ದ, ಸಹೋದರತೆಗೆ ಮಾಡಿದ ಅವಮಾನ. ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕಾನೂನಿನ ಮುಂದೆ ದೇಶದ ಎಲ್ಲ ಜನರು ಸಮಾನರು ಎಂಬುವುದನ್ನು ಸಿಎಎ ಒಪ್ಪುವುದಿಲ್ಲ. ಅಲ್ಪಸಂಖ್ಯಾತರ ಹಿತವನ್ನು ಕಾಯುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯ. ಧರ್ಮ, ಮೂಲವಂಶ, ಜಾತಿ, ಲಿಂಗ, ಜನ್ಮಸ್ಥಳ ಆಧಾರದಲ್ಲಿ ಮಾಡುವ ತಾರತಮ್ಯವನ್ನು ಸಂವಿಧಾನ ಒಪ್ಪುವುದಿಲ್ಲ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಜಬೀನಾಖಾನಂ, ಟಿ. ಜಬೀನಾ ಆಫಾ, ಕರಿಬಸಪ್ಪ, ಸಿಪಿಐಎಂ ಮುಖಂಡ ಕೆ.ಎಲ್. ಭಟ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಅವರಗೆರೆ ವಾಸು, ಜನಶಕ್ತಿಯ ಪವಿತ್ರಾ, ಎಐಎಂಎಸ್ಎಸ್ ಜಿಲ್ಲಾ ಅಧ್ಯಕ್ಷೆ ಜ್ಯೋತಿ ಕುಕ್ಕುವಾಡ ಅವರೂ ಮಾತನಾಡಿದರು.