ದಾವಣಗೆರೆ: ಮಹಿಳೆಯರ ಕಾರುಗಳ ಕಲರವ. ಅದಕ್ಕೆ ಹಿಮ್ಮೇಳ ಎಂಬಂತೆ ಡೊಳ್ಳು ಕುಣಿತ, ನಂದಿಕೋಲು ಸಮಾಳ, ಹಗಲುವೇಷ ಮತ್ತು ಗೊಂಬೆ ಕಲಾತಂಡಗಳ ವೈಭವ.
ಇದು ಲೋಕಸಭಾ ಚುನಾವಣೆ-2019 ರ ಅಂಗವಾಗಿ ಸ್ವೀಪ್ ವತಿಯಿಂದ ಗುರುವಾರ ನಗರದ ಹೈಸ್ಕೂಲ್ ಮೈದಾನದಿಂದ ಏರ್ಪಡಿಸಲಾಗಿದ್ದ ಮಹಿಳಾ ಕಾರ್ ರ್ಯಾಲಿಯಲ್ಲಿ ಕಂಡು ಬಂದ ದೃಶ್ಯಗಳು.
ಚುನಾವಣಾ ಸಾಮಾನ್ಯ ವೀಕ್ಷಕ ಆನಂದ್ ಶರ್ಮಾ, ಜಿಲ್ಲಾ ಪಂಚಾಯಿತಿ ಸಿಇಒ ಎಚ್. ಬಸವರಾಜೇಂದ್ರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಹಸಿರು ನಿಶಾನೆ ತೋರುವ ಮೂಲಕ ಈ ರ್ಯಾಲಿಗೆ ಚಾಲನೆ ನೀಡಿದರು.
ದಾವಣಗೆರೆಯಿಂದ ಚನ್ನಗಿರಿ, ಹರಿಹರ ಮತ್ತು ಹೊನ್ನಾಳಿ ತಾಲ್ಲೂಕುಗಳ ಮಾರ್ಗವಾಗಿ ಸಾಗಿ ಪುನಃ ದಾವಣಗೆರೆ ತಲುಪಿತು. ಸುಮಾರು 200 ಕಿಲೋಮೀಟರ್ ಸಾಗಿ ಜಾಗೃತಿ ಮೂಡಿಸಲಾಯಿತು.