ದಾವಣಗೆರೆ: ರಾಜ್ಯ ಪರಿಸರ ಯೋಜನೆ ತಯಾರಿಸಲು ಜಿಲ್ಲಾ ಪರಿಸರ ಯೋಜನೆ ಸಿದ್ಧಪಡಿಸುವುದು ಅಗತ್ಯ. ಹಾಗಾಗಿ ಸಂಬಂಧಪಟ್ಟ ಎಲ್ಲ ಇಲಾಖೆಗಳು ಆ.24 ರೊಳಗಾಗಿ ಜಿಲ್ಲೆಗೆ ಸಂಬಂಧಿಸಿದ ಮಾಹಿತಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಪರಿಸರ ಯೋಜನೆ-2021 ತಯಾರಿಸುವ ಕುರಿತು ಆಯೋಜಿಸಿದ್ದ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಆ.24 ರೊಳಗಾಗಿ ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಬೇಕು. ಆ.25 ಕ್ಕೆ ಎಲ್ಲ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ವರದಿ ತಯಾರಿಸಬೇಕು. ಆ.26 ರೊಳಗಾಗಿ ಪೂರ್ಣಗೊಳಿಸಬೇಕು.
ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಪರಿಸರ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಆ.27 ರಂದು ಸಿದ್ಧಪಡಿಸಿರುವ ಪೂರ್ಣ ಪ್ರಮಾಣದ ಜಿಲ್ಲಾ ಪರಿಸರ ಯೋಜನೆಯನ್ನು ವೆಬ್ಸೈಟ್ ಗೆ ಅಪ್ಲೋಡ್ ಮಾಡಬೇಕು ಎಂದು ಸೂಚಿಸಿದರು.
ವೆಬ್ಸೈಟ್ಗೆ ನಿಖರವಾದ ಒಂದು ಹೆಸರನ್ನು ನೀಡಿದರೆ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕಿ ನಜ್ಮಾ, ಪರಿಸರ ಇಲಾಖೆ, ನೀರಾವರಿ ಇಲಾಖೆ, ಸಂಖ್ಯಾಶಾಸ್ತ್ರೀಯ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಸಂಬಂಧಪಟ್ಟ ಎಲ್ಲಾ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.