ಹೊನ್ನಾಳಿ: ಅತಿವೃಷ್ಟಿಯಿಂದ ಹಾನಿಗೊಳಗಾದ 500 ಮನೆಗಳ ಸಂತ್ರಸ್ತರಿಗೆ ಇನ್ನೂ ಪರಿಹಾರ ಕೊಡದಿರುವುದಕ್ಕೆ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರೇ ನೇರ ಕಾರಣ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.
ಇಲ್ಲಿನ ಗುರುಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮನೆಹಾನಿ ಮಂಜೂರಾತಿ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹೊನ್ನಾಳಿ ತಾಲ್ಲೂಕಿನಲ್ಲಿ ಜೂನ್ನಿಂದ ಸೆಪ್ಟೆಂಬರ್ವರೆಗೆ ಬಿದ್ದ ಬಾರಿ ಮಳೆಗೆ ಮೊದಲ ಹಂತದಲ್ಲಿ 288, ಎರಡನೇ ಹಂತದಲ್ಲಿ 284 ಹಾಗೂ ಮೂರನೇ ಹಂತದಲ್ಲಿ 300 ಸೇರಿ ಒಟ್ಟು 872 ಮನೆಗಳಿಗೆ ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ 1,111 ಸೇರಿ ಅವಳಿ ತಾಲ್ಲೂಕಿನಲ್ಲಿ ಒಟ್ಟು 2,083 ಮನೆಗಳಿಗೆ ಪರಿಹಾರ ಮಂಜೂರಾತಿ ಪತ್ರ ನೀಡಲಾಗಿದೆ. ಆದರೆ, 500 ಜನ ಸಂತ್ರಸ್ತರಿಗೆ ಮಂಜೂರಾತಿ ಪತ್ರ ನೀಡಬೇಕಿದೆ. ಮಾಜಿ ಶಾಸಕರು ತಾಲ್ಲೂಕು ಆಡಳಿತ ಹಾಗೂ ನನ್ನ ವಿರುದ್ದ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಹೇಳಿದ್ದರಿಂದ ಮಂಜೂರಾತಿ ಪತ್ರ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಮಾಜಿ ಶಾಸಕರು ತಮ್ಮ ಮನೆ ಬಾಗಿಲಿಗೆ ಬಂದಾಗ ಅವರನ್ನು ಪ್ರಶ್ನಿಸಿ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮಭೋವಿ, ತಹಶೀಲ್ದಾರ್ ಎಚ್.ಜೆ. ರಶ್ಮಿ ಮಾತನಾಡಿದರು. ನ್ಯಾಮತಿ ತಹಶೀಲ್ದಾರ್ ರೇಣುಕಾ, ಕೆಎಸ್ಐಡಿಎಲ್ ನಿರ್ದೇಶಕ ಶಿವು ಹುಡೇದ್, ಉಪ ತಹಶೀಲ್ದಾರ್ ಮಂಜುನಾಥ್ ಇಂಗಳಗೊಂದಿ, ಅವಳಿ ತಾಲ್ಲೂಕಿನ ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳು ಹಾಜರಿದ್ದರು.