ಹರಿಹರ (ದಾವಣಗೆರೆ): ಯಾರು ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬುದು ಗೊತ್ತಾಗಲು ಒಂದು ವರ್ಷ ಬೇಕು. ಚುನಾವಣೆ ಹತ್ತಿರ ಬಂದಾಗ ಕೆಲವರು ಹೋಗೋದು, ಬರೋದು ಇದ್ದಿದ್ದೆ. ಈಗ ಊಹಪೋಹಗಳಷ್ಟೇ ಹರಿದಾಡುತ್ತವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಹರಿಹರದಲ್ಲಿ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.
‘ಕಾಂಗ್ರೆಸ್ಗೆ ಯಾರು ಬಂದರೂ ಬಿಟ್ಟರೂ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಹಿಂದಿನ ಎರಡು ಮೂರು ಚುನಾವಣೆಗಳ ಫಲಿತಾಂಶ ನಮ್ಮ ಪರವಾಗಿ ಬಂದಿದೆ. ಇಂದು ಮುಂದಿನ ಚುನಾವಣೆಯ ದಿಕ್ಸೂಚಿ’ ಎಂದು ತಿಳಿಸಿದರು.
‘ಲಕ್ಷ್ಮಣ ಸವದಿ, ಉಮೇಶ್ ಕತ್ತಿ ಸಹಿತ ಯಾರೂ ಕಾಂಗ್ರೆಸ್ ಅನ್ನು ಸಂಪರ್ಕ ಮಾಡಿಲ್ಲ. ಅವರು ಬಂದರೆ ನಿಮಗೆ ತಿಳಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಗೋಕಾಕ ಅಭಿವೃದ್ಧಿ ಆಗಿಲ್ಲ ಅಂದರೆ ನಾನು ಸ್ಥಳದಲ್ಲೇ ರಾಜೀನಾಮೆ ನೀಡುತ್ತೇನೆ’ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ‘ಗೋಕಾಕಕ್ಕೆ ಬಂದು ನೋಡಿದ್ರೆ ಗೊತ್ತಾಗುತ್ತದೆ. ನೀವೂ ಬಂದು ನೋಡಿ’ ಎಂದರು.