ದಾವಣಗೆರೆ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸೋಮವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಎತ್ತಿನ ಗಾಡಿಯಲ್ಲಿ ಮೆರವಣಿಗೆಯ ಮುಖಾಂತರ ಪ್ರತಿಭಟನೆ ನಡೆಸಲಾಯಿತು
ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಅವರು ರಾಯಣ್ಣನ ಪ್ರತಿಮೆಗೆ ಹೂವಿನ ಹಾರ ಹಾಕುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು.
ಸಂಗೊಳ್ಳಿ ರಾಯಣ್ಣನ ವೃತ್ತದಿಂದ ರಿಂಗ್ ರಸ್ತೆಯ ಮೂಲಕ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಕಾಂಗ್ರೆಸ್ ಕಚೇರಿವರೆಗೆ ಎತ್ತಿನ ಗಾಡಿ ಮೆರವಣಿಗೆ ನಡೆಸಲಾಯಿತು.
ಯುಪಿಎ ಸರ್ಕಾರ ಇರುವಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚತೈಲ ಬೆಲೆ 140 ಡಾಲರ್ಗೂ ಅಧಿಕ ಇರುವಾಗ ಪೆಟ್ರೋಲ್ ಬೆಲೆ ₹ 70 ಇತ್ತು. ಆಗ ಬೆಲೆ ಏರಿಕೆಯಾಗಿದೆ ಎಂದು ಬಿಜೆಪಿ ಪ್ರತಿಭಟನೆ ನಡೆಸುತ್ತಿತ್ತು. ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚತೈಲ ಬೆಲೆ 70 ಡಾಲರ್ಗೆ ಇಳಿದಿದೆ. ಆದರೆ ಪೆಟ್ರೋಲ್ ಬೆಲೆ ₹ 100 ದಾಟಿ ಹೋಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರಾದ ದಿನೇಶ್ ಕೆ. ಶೆಟ್ಟಿ, ಎ. ನಾಗರಾಜ್, ಆಶಾ ಉಮೇಶ್, ಹಾಲೇಶ್, ಸತೀಶ್ ಕುಮಾರ್, ಮುನಿರತ್ನ ಮಾಲಾ, ಜಮ್ನಳ್ಳಿ ನಾಗರಾಜ್, ಶುಭಮಂಗಳ, ಸಂಗಮ್ಮ, ರಾಧಾಬಾಯಿ, ಭಾರತಿ, ವಿದ್ಯಾ, ಸಲ್ಮಾಬಾನು, ಬಿ.ಎಂ. ಪಾಟೀಲ್, ಶ್ರೀನಿವಾಸ್ ಅವರೂ ಇದ್ದರು.