ದಾವಣಗೆರೆ: ‘ಬಿಜೆಪಿಗೆ ನರೇಂದ್ರ ಮೋದಿ ಇದ್ದಾರೆ. ಕಾಂಗ್ರೆಸ್ನವರಿಗೆ ಯಾರಿದ್ದಾರೆ? ಅವರು ತಬ್ಬಲಿ ಮಕ್ಕಳು’ ಎಂದು ಬಿಜೆಪಿ ರಾಜ್ಯ ನಾಯಕ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದರು.
ನಗರದಲ್ಲಿ ಬುಧವಾರ ಮಾತನಾಡಿದ ಅವರು, ‘ಕಾಂಗ್ರೆಸ್ ದೇಶದಾದ್ಯಂತ ನೆಲೆ ಕಳೆದುಕೊಂಡಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ ಕ್ಷೇತ್ರಗಳಲ್ಲಿ 377 ಕಡೆ ಠೇವಣಿಯನ್ನು ಕಳೆದುಕೊಂಡಿದೆ. 2 ಕಡೆ ಮಾತ್ರ ಗೆದ್ದಿದ್ದಾರೆ. ರಾಜ್ಯದಲ್ಲಿ ಇನ್ನೂ ಸ್ವಲ್ಪ ಉಸಿರಾಡುತ್ತಿದೆ. ಅದೇ ಕಾರಣದಿಂದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಏನೇನೋ ಮಾತನಾಡುತ್ತಿದ್ದಾರೆ. ಮುಂದಿನ ಚುನಾವಣೆಯ ನಂತರ ಇಲ್ಲೂ ಉಸಿರು ನಿಂತು ಹೋಗಲಿದೆ. ಇದು ದುರಹಂಕಾರದ ಮಾತಲ್ಲ. ರಾಜ್ಯದಲ್ಲಿ ಈಗ ಬಿಜೆಪಿಗಿರುವ ಅನುಕೂಲಕರ ವಾತಾವರಣ ಹಾಗಿದೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು’ ಎಂದು ತಿಳಿಸಿದರು.
ಕಂದಾಯ ಸಚಿವ ಆರ್. ಅಶೋಕ್, ‘ನಮ್ಮಲ್ಲಿ ಮೋದಿ, ಅಮಿತ್ ಶಾ, ನಡ್ಡಾ ಮುಂತಾದ ಕೇಂದ್ರ ನಾಯಕರು ಬಂದು ಭಾಷಣ ಮಾಡುತ್ತಾರೆ. ಕಾಂಗ್ರೆಸ್ನಲ್ಲಿ ಯಾರೂ ಇಲ್ಲ. ರಾಹುಲ್ ಗಾಂಧಿ ಬಂದು ಭಾಷಣ ಮಾಡಿದರೆ ಇದ್ದ ವೋಟು ಕಳೆದುಕೊಳ್ಳುತ್ತಾರೆ’ ಎಂದು ಅಣಕಿಸಿದರು.