ದಾವಣಗೆರೆ: ಹಣ ದುರುಪಯೋಗ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್ ಸೇರಿ ನಾಲ್ವರ ವಿರುದ್ಧ ತನಿಖಾ ತಂಡ ಶುಕ್ರವಾರ ತನಿಖೆ ಪೂರ್ಣಗೊಳಿಸಿದೆ.
ಜಾಗೃತ ಕೋಶದ ಸಹಾಯಕ ಆಡಳಿತಾಧಿಕಾರಿ ಮುರುಳಿ, ಕಚೇರಿ ಅಧೀಕ್ಷಕಿ ಉಷಾರಾಣಿ, ಇಎಸ್ಎಂ ಕಚೇರಿ ಅಧೀಕ್ಷಕಿ ಸುರೇಶ್ ಹಾಗೂ ಜಾಗೃತ ಕೋಶದ ಅಧೀಕ್ಷಕ ಶಿವಕುಮಾರ್ ಅವರ ವಿರುದ್ಧ ಮೂರು ದಿನಗಳ ಕಾಲ ತನಿಖೆ ನಡೆದಿದೆ ಎನ್ನಲಾಗಿದೆ.
ಕೊರೊನಾ ಸಂದರ್ಭ ಕೇಂದ್ರ ನಿಧಿಯಲ್ಲಿ ₹ 5 ಕೋಟಿಯನ್ನು ಕೊರೊನಾ ಸಂದರ್ಭದಲ್ಲಿ ಅವಶ್ಯಕವಾಗಿ ಬೇಕಾಗಿದ್ದ ವೆಂಟಿಲೇಟರ್ಗಳು, ಆಕ್ಸಿಜನ್ಗಳ ಖರೀದಿಗೆ ಬಳಸದೇ ಕಂಪ್ಯೂಟರ್ಗಳ ಖರೀದಿಗೆ ಬಳಸಿ ಭ್ರಷ್ಟಾಚಾರ ಎಸಗಿರುವ ಬಗ್ಗೆ ಆರೋಪವಿದ್ದು, ಸರ್ಕಾರದ ಹಂತದಲ್ಲಿ ದೂರು ಸ್ವೀಕೃತವಾಗಿದೆ.
ಈ ಕುರಿತು ತನಿಖೆಗೆ ತಂಡ ರಚಿಸಿ ನವೆಂಬರ್ 24ರಂದು ಸರ್ಕಾರ ಆದೇಶ ಹೊರಡಿಸಿ ವರದಿ ಸಲ್ಲಿಸುವಂತೆ ಇಲಾಖೆ ಸೂಚಿಸಿತ್ತು. ಈ ನಿಮಿತ್ತ ತನಿಖಾ ತಂಡವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಗೆ ಬಂದು ತನಿಖೆ ಕೈಗೊಂಡಿದೆ.