ದಾವಣಗೆರೆ: ರಾಜಸ್ಥಾನದ ಅಜ್ಮೀರ್ ಗೆ ಹೋಗಿ ಬಂದಿದ್ದ 22 ವರ್ಷದ ಯುವಕನಲ್ಲಿ (ಪಿ. 847) ಕೊರೊನಾ ವೈರಸ್ ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ. ಅಲ್ಲಿಗೆ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 68ಕ್ಕೆ ಏರಿದೆ.
ಮಾರ್ಚ್ 20ಕ್ಕೆ ಈ ಯುವಕ ಸೇರಿ 16 ಮಂದಿ ಇದ್ದ ತಂಡ ಅಜ್ಮೀರ್ಗೆ ಹೋಗಿದ್ದರು. ಮೇ 1ಕ್ಕೆ ಅಜ್ಮೀರ್ನಿಂದ ದಾವಣಗೆರೆಗೆ ಹೊರಟು, ಮೇ 3ರಂದು ತಲುಪಿದ್ದರು. ಅವರನ್ನು ಪಿ.ಬಿ.ರೋಡ್ನಲ್ಲಿರುವ ಕಲ್ಯಾಣಮಂಟಪ ಒಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಲ್ಯಾಬ್ಗೆ ಕಳುಹಿಸಲಾಗಿತ್ತು. ಈ ಯುವಕನನ್ನು ಹೊರತುಪಡಿಸಿ ಉಳಿದವರ ಫಲಿತಾಂಶ ಬಂದಿತ್ತು.
ಎಲ್ಲವೂ ನೆಗೆಟಿವ್ ಆಗಿದ್ದವು. ಹಾಗಾಗಿ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಯುವಕನಲ್ಲಿ ಸೋಂಕು ಇರುವುದು ಖಚಿತಗೊಂಡಿರುವುದರಿಂದ ಈಗ ಎಲ್ಲರನ್ನು ಮತ್ತೆ ಕರೆತಂದು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ನಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಇದಲ್ಲದೇ 18 ಮಂದಿಯನ್ನು ದ್ವಿತೀಯ ಸಂಪರ್ಕ ಎಂದು ಗುರುತಿಸಲಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಯುವಕನ ಮನೆಯಲ್ಲಿ ಎಪಿಸೆಂಟರ್ ಎಂದು ಗುರುತಿಸಲಾಗಿದೆ. ಶಿವನಗರವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ ಎಂದರು..
ಹೊನ್ನಾಳಿಯಲ್ಲಿ 8 ಜನರು ತಪ್ಪಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವದಂತಿ ಹರಡಿತ್ತು. ಯಾರೂ ತಪ್ಪಿಸಿಕೊಂಡಿಲ್ಲ. ಅವರು ಗುಜರಾತಿನ ಅಹಮದಾಬಾದಿನಿಂದ ನಿಪ್ಪಾಣಿಗೆ ಬಂದು ಜಿಲ್ಲೆಗೆ ಬಂದಿದ್ದಾರೆ. ಆ ತಂಡವನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಎಚ್ಒ ಡಾ. ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಇದ್ದರು.