ಮಾಯಕೊಂಡ:ಮಾಯಕೊಂಡದಲ್ಲಿ ನಡೆದ ‘ಕಸ್ಟೋಡಿಯಲ್ ಡೆತ್’ ಪ್ರಕರಣ ಸಂಬಂಧ ಸಿಐಡಿ ವಿಚಾರಣೆ ಆರಂಭಿಸಿದೆ.
ಸಿಐಡಿ ಡಿವೈಎಸ್ಪಿ ಗಿರೀಶ್ ನೇತೃತ್ವದ ತಂಡ ಗುರುವಾರ ಪೊಲೀಸ್ ಠಾಣೆಗೆ ಭೇಟಿ ನೀಡಿ, ದಾಖಲೆ ಪರಿಶೀಲಿಸಿತು. ಬಳಿಕ ವಿಠಲಾಪುರ ಗ್ರಾಮದ ಮರುಳಸಿದ್ದಪ್ಪ ಅವರ ಶವ ದೊರೆತ ಸ್ಥಳಪರಿಶೀಲನೆ ಮಾಡಿ ಮಹಜರು ನಡೆಸಿತು. ಸ್ಥಳೀಯ ಪೊಲೀಸ್ ಅಧಿಕಾರಿಗಳು ಜೊತೆಗಿದ್ದರು.
ಬಳಿಕ ಮಾಯಕೊಂಡ ಪೊಲೀಸ್ ಠಾಣೆಗೆ ಬಂದು ಲಾಕಪ್ ಪರಿಶೀಲನೆ ನಡೆಸಿತು. ಠಾಣೆಯ ಪೊಲೀಸ್ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಒಬ್ಬೊಬ್ಬ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ಕರೆದು ವಿವರ ಪಡೆದರು ಎಂದು ಮೂಲಗಳು ತಿಳಿಸಿವೆ.
ಬಳಿಕವಿಠಲಾಪುರ ಗ್ರಾಮಕ್ಕೆ ತೆರಳಿ ಮರುಳಸಿದ್ದಪ್ಪ ಅವರ ಕುಟುಂಬದವರ ವಿಚಾರಣೆ ನಡೆಸಿತು.
ಗಿರೀಶ್ ನೇತೃತ್ವದ ತಂಡದಲ್ಲಿ ಇಬ್ಬರು ಇನ್ಸ್ಪೆಕ್ಟರ್ ಸೇರಿ 5 ಜನರು ಇದ್ದಾರೆ. ಬುಧವಾರ ಸಂಜೆಯೇ ದಾವಣಗೆರೆಗೆ ತಂಡ ಬಂದಿತ್ತು. ಗುರುವಾರ ಬೆಳಿಗ್ಗೆ ಮಾಯಕೊಂಡ ಠಾಣೆಗೆ ತೆರಳಿ ಪರಿಶೀಲನೆ ನಡೆಸಿತು.