ದಾವಣಗೆರೆ: ‘ರಸ್ತೆ ನಿಯಮಗಳನ್ನು ಪಾಲಿಸಿ-ಅಪರಾಧಗಳನ್ನು ತಪ್ಪಿಸಿ’, ‘ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಬೇಡಿ’, ‘ರಸ್ತೆಯಲ್ಲಿ ಪಾದಚಾರಿಗಳಿಗೆ ಮೊದಲು ಆದ್ಯತೆಯನ್ನು ನೀಡಿ’, ‘ನಾಗರಿಕರ ನಿರ್ಲಕ್ಷತನ-ಕಳ್ಳರ ಚಾಣಾಕ್ಷತನ ಆಗುವುದು ಕಳ್ಳತನ’, ‘ನಾವು ಮೊದಲು ತಂಬಾಕು ತಿಂದರೆ ಅದು ನಮ್ಮನ್ನು ನಂತರ ತಿನ್ನುತ್ತದೆ’ ಮುಂತಾದ ಜಾಗೃತಿ ಘೋಷಣಾ ಫಲಕಗಳೊಂದಿಗೆ ನಗರದ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳು ನಗರದ ಮುಖ್ಯ ರಸ್ತೆಗಳಲ್ಲಿ ಜಾಗೃತಿ ಜಾಥಾದಲ್ಲಿ ಸಾಗಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಸೈಕಲ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಸ್ವತಃ ಸೈಕಲಲ್ಲಿ ಸಾಗಿ ಜಾಗೃತಿ ಮೂಡಿಸಿದರು.
‘ಸಾರ್ವಜನಿಕರಲ್ಲಿ ಅಪರಾಧ ತಡೆ ಕುರಿತು ಹಾಗೂ ರಸ್ತೆ ಸುರಕ್ಷತೆ ಕುರಿತಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ಈ ಮಾಸಾಚರಣೆಯ ಮುಖ್ಯ ಉದ್ದೇಶವಾಗಿದೆ. ಡಿಸೆಂಬರ್ ತಿಂಗಳು ಪೂರ್ತಿ ಎಲ್ಲ ಪೊಲೀಸ್ ಠಾಣೆಗಳು, ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಅಪರಾಧ ತಡೆ ಕುರಿತಾಗಿ ಜಾಗೃತಿ ಮೂಡಿಸಲಿದ್ದಾರೆ’ ಎಂದು ಎಸ್ಪಿ ತಿಳಿಸಿದರು.
ಜಾಥಾದಲ್ಲಿ ಎಎಸ್ಪಿ ರಾಜೀವ್, ನಗರ ಡಿವೈಎಸ್ಪಿ ನಾಗೇಶ್ ಐತಾಳ್, ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ನಾಗಮ್ಮ, ಇನ್ಸ್ಪೆಕ್ಟರ್ಗಳಾದ ಗಜೇಂದ್ರಪ್ಪ, ಸತೀಶ್ ಕುಮಾರ್, ಕೆಟಿಜೆ ನಗರ ಪಿಎಸ್ಐ ವೀರೇಶ್, ಟ್ರಾಫಿಕ್ ಪಿಎಸ್ಐ ಮಂಜುನಾಥ ಲಿಂಗಾರೆಡ್ಡಿ, ಪೊಲೀಸರು, ವಿದ್ಯಾರ್ಥಿಗಳು ಇದ್ದರು.