ದಾವಣಗೆರೆ: ದೇಶದಲ್ಲಿ ಅನೇಕ ಸವಾಲುಗಳಿದ್ದು, ದೇಶದ ಆಂತರಿಕ ಭದ್ರತೆ ಬಲಿಷ್ಠವಾಗಿದೆ. ಆದ್ದರಿಂದ ಅವುಗಳನ್ನು ಸಮರ್ಥವಾಗಿದೆ ಎದುರಿಸುತ್ತಿದೆ ಎಂದು ಪೂರ್ವ ವಲಯ ಐಜಿಪಿ ಅಮ್ರಿತ್ ಪಾಲ್ ಹೇಳಿದರು.
ದಾವಣಗೆರೆ ಪೊಲೀಸ್ ಇಲಾಖೆಯಿಂದ ಸೋಮವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
15 ವರ್ಷಗಳ ಹಿಂದೆ 3200ರಿಂದ 3300 ಯೋಧರು ಹುತಾತ್ಮರಾಗುತ್ತಿದ್ದರು. ಈಗ ಈ ಪ್ರಮಾಣ 300 ಇದೆ. ಇದು ದೇಶದ ಆಂತರಿಕ ಸುರಕ್ಷತೆಯ ಪ್ರತೀಕ ಎಂದು ಹೇಳಿದರು.
ಪೊಲೀಸರು ಸದೃಢರಾದರೆ ಮಾತ್ರ ದೇಶದ ರಕ್ಷಣೆ ಸಾಧ್ಯ. ಈ ನಿಟ್ಟಿನಲ್ಲಿ ಪೊಲೀಸರು ಆರೋಗ್ಯಕ್ಕೆ ಒತ್ತು ನೀಡಬೇಕು. ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ನಂತರ ರೋಗಗಳಿಗೆ ಔಷಧ ಹಾಗೂ ಆಹಾರವನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಪ್ರೊಟೀನ್ಯುಕ್ತ ಆಹಾರವನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, "ದೇಶವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟ ಯೋಧರನ್ನು ನಾವು ಸ್ಮರಿಸಬೇಕಿದೆ ಹಾಗೂ ಅವರ ಕುಟುಂಬ ವರ್ಗದವರಿಗೆ ನೈತಿಕ ಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಬೇಕಿದೆ ಎಂದು ಹೇಳಿದರು.